ಧರ್ಮಶಾಲಾದಲ್ಲಿ ದಲೈ ಲಾಮಾ ಅವರನ್ನು ಭೇಟಿ ಮಾಡಿದ ಪ್ರೊ. ಜಿ.ಹೇಮಂತ್ ಕುಮಾರ್ ಮೈಸೂರು,ನವೆಂಬರ್,3,2022(..): ಹಿಮಾಚಲ ಪ್ರದೇಶದಲ್ಲಿರುವ ಧರ್ಮಶಾಲಾದಲ್ಲಿ ಟಿಬೇಟ್‌ ನ ಧರ್ಮಗುರು ದಲೈ ಲಾಮಾ ಅವರನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಗುರುವಾರ ಭೇಟಿಯಾಗಿ ಮಾತುಕತೆ ನಡೆಸಿದರು. ಇದೇ ವೇಳೆ ಮಾತನಾಡಿದ ದಲೈ ಲಾಮಾ ಅವರು, ಮೈಸೂರು ವಿವಿಯಲ್ಲಿ ಬುದ್ಧಿಸಂಗೆ ಸಂಬಂಧಪಟ್ಟಂತೆ ಕೋರ್ಸ್‌ ಗಳು ಶುರುವಾಗಿರುವುದು ಸಂತೋಷದ ವಿಷಯ. ಇದೇ ರೀತಿ ಹಲವು ವಿವಿಗಳಲ್ಲಿ ಬುದ್ಧ ತತ್ವ ಸಾರುವ ಕೋರ್ಸ್‌ ಗಳು ಆರಂಭವಾಗಬೇಕು. ಜಗತ್ತು ಶಾಂತಿಯಿಂದ ಇರಲು ಬುದ್ಧನ ತತ್ವ ಎಲ್ಲೆಡೆ ಹರಡಬೇಕು ಎಂದರು. ಬುದ್ಧಿಸಂ ಒಂದು ಪಾರಂಪರಿಕ ಚಿಂತನೆ. ಅದಕ್ಕೆ ಆಧುನಿಕ ವಿಷಯಗಳು ಸೇರ್ಪಡೆಯಾದರೆ ಉತ್ತಮ ಶಿಕ್ಷಣವನ್ನು ಮಕ್ಕಳಿಗೆ ನೀಡಿದಂತಾಗುತ್ತದೆ. ಜನರಿಗೂ ಇದು ಇಷ್ಟವಾಗುತ್ತದೆ. ಪಾಶ್ಚಿಮಾತ್ಯ ದೇಶಗಳೂ ಕೂಡ ನಮ್ಮ ಸಂಸ್ಕೃತಿಯನ್ನು ಅನುಸರಿಸುತ್ತಿವೆ. ನಾವೆಲ್ಲರೂ ಸಹೋದರತ್ವದ ಭಾವನೆಯಿಂದ ಇರಬೇಕು ಎಂದು ಕಿವಿಮಾತು ಹೇಳಿದರು. ಪ್ರಸ್ತುತ ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿಎಯಲ್ಲಿ ಟಿಬೆಟಿಯನ್ ಸ್ಟಡೀಸ್ ಸೇರಿದಂತೆ ಮೂರು ಕೋರ್ಸ್ ಗಳು ಆರಂಭಗೊಂಡಿವೆ. ಇದೇ ವೇಳೆ ದಲೈ ಲಾಮಾ ಅವರ ಸಂದೇಶ ಹಾಗೂ ಜೀವನ ಚರಿತ್ರೆ ಇರುವ ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ನಾಗಣ್ಣ ಅವರು ಕನ್ನಡಕ್ಕೆ ಅನುವಾದ ಮಾಡಿರುವ ನಾಲ್ಕು ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಅನುಕಂಪ ಮತ್ತು ವ್ಯಕ್ತಿ, ಜಾಗತಿಕ ಸಮುದಾಯ ಹಾಗೂ ಸಾರ್ವತ್ರಿಕ ಜವಾಬ್ದಾರಿ ಅವಶ್ಯಕತೆ, ಬೌದ್ಧ ಧರ್ಮ ಹಾಗೂ ತಾಂತ್ರಿಕ ಧ್ಯಾನ, ಒಂದು ಪ್ರವೇಶ, ವಿಶ್ವ ಶಾಂತಿಗೆ ಒಂದು ಮಾನವೀಯ ಮಾರ್ಗ ಎಂಬ ನಾಲ್ಕು ಪುಸ್ತಕಗಳನ್ನು ದಲೈ ಲಾಮಾ ಬಿಡುಗಡೆ ಮಾಡಿದರು. ಈ ವೇಳೆ ಮೈವಿವಿ ವಿಶೇಷಾಧಿಕಾರಿ ಡಾ.ಚೇತನ್ ಕುಮಾರ್ ಇದ್ದರು. : -- . . -. - – –