‘ನಮ್ಮನೆ ಸುಮ್ಮನೆ’ಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ. ಬೆಂಗಳೂರು, ನವೆಂಬರ್ 1, 2022 (..):ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದಲ್ಲಿ ದಿಕ್ಕು ದೆಸೆ ಇಲ್ಲದೆ ಸುತ್ತುತ್ತಿದ್ದಂತಹ ನಿರ್ಗತಿಕ ಮಕ್ಕಳು, ಪುರುಷರು ಹಾಗೂ ಮಹಿಳೆಯರು ಒಳಗೊಂಡಂತೆ ಸುಮಾರು 50 ಜನರಿಗೆ ಬೆಂಗಳೂರಿನಲ್ಲಿರುವ ‘ನಮ್ಮನೆ ಸುಮ್ಮನೆ’ ಆಶ್ರಯ ತಾಣವಾಗಿದೆ. 2022ರಲ್ಲಿ ಬೆಂಗಳೂರು ನಗರದ ಕೆಲವು ತ್ರಿಲಿಂಗಿಯರು ಜೊತೆಗೂಡಿ ಅನಾಥ ಮಕ್ಕಳು ಮತ್ತು ನಿರ್ಗತಿಕ ಜನರಿಗೆ ಆಶ್ರಯ ಕಲ್ಪಿಸುವ ಉದ್ದೇಶದೊಂದಿಗೆ ‘ನಮ್ಮನೆ ಸುಮ್ಮನೆ’ ಎಂಬ ಹೆಸರಿನಡಿ ಒಂದು ಆಶ್ರಯತಾಣವನ್ನು ಸ್ಥಾಪಿಸಿ ಸುದ್ದಿ ಮಾಡಿದರು. ಈಗ ಈ ಆಶ್ರಯತಾಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದು ಮತ್ತೊಮ್ಮೆ ಸುದ್ದಿಯಲ್ಲಿದೆ. “ನಕ್ಷತ್ರ ಮೇಡಂ ನನ್ನನ್ನು ಗುರುತಿಸುವವರೆಗೂ ನಾನು ಬೆಂಗಳೂರಿನ ಕೆಎಸ್‌ ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ವಾಸಿಸುತ್ತಿದ್ದೆ. ನಾನು ಮುಳಬಾಗಿಲು ತಾಲ್ಲೂಕಿನ ರಾಗಿಮನುಗಟ್ಟು ಗ್ರಾಮದ ನಿವಾಸಿಯಾಗಿದ್ದು ನನ್ನನ್ನು ನನ್ನ ಮನೆಯವರು ಮನೆಯಿಂದ ಹೊರಗೆ ಹಾಕಿದರು. ನಾನು ನನ್ನ ಸೊಸೆಯರೊಂದಿಗೆ ಜಗಳವಾಡಿದ್ದೆ ನನಗೆ ಈ ಗತಿ ಬರಲು ಕಾರಣ. ಆದರೆ ಈಗ ನಾನು ಇಲ್ಲಿ ತುಂಬಾ ಸಂತೋಷವಾಗಿದ್ದೇನೆ. ಒಂದು ವೇಳೆ ನನ್ನ ಮಕ್ಕಳು ನನ್ನನ್ನು ಅವರೊಂದಿಗೆ ಇರುವಂತೆ ಬಯಸಿದರೆ ನಾನು ಮನೆಗೆ ಹಿಂದಿರುಗುತ್ತೇನೆ,” ಎಂದು ಇಲ್ಲಿ ಆಶ್ರಯ ಪಡೆದಿರುವ ಮಹಿಳೆ ಲಕ್ಷ್ಮಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಸಮಾಜದಲ್ಲಿ ಈ ರೀತಿಯ ಹಲವು ಕಾರಣಗಳಿಂದಾಗಿ ಅನೇಕ ಮಹಿಳೆಯರು ಮನೆಯಿಂದ ಹೊರಗೆ ಜೀವಿಸಬೇಕಾದ ಪರಿಸ್ಥಿತಿ ಇದೆ. “ನಾನು ಮೊದಲಿಗೆ ದೊಡ್ಡಬಳ್ಳಾಪುರದಿಂದ ಬೆಂಗಳೂರಿನ ಮೆಜೆಸ್ಟಿಕ್‌ ಗೆ ಬಂದು ಇಳಿದಾಗ ಏನು ಮಾಡಬೇಕು ಎಂದು ಗೊತ್ತಾಗಲಿಲ್ಲ. ನಕ್ಷತ್ರ ಮೇಡಂ ಅವರು ನನ್ನನ್ನು ಇಲ್ಲಿಗೆ ಕರೆತಂದರು. ನನಗೆ ಇಲ್ಲಿ ಯಾವ ರೀತಿಯ ತೊಂದರೆಯೂ ಇಲ್ಲ. ನನ್ನ ಮಕ್ಕಳಿಗೆ ನಾನು ಇಲ್ಲಿರುವುದು ಗೊತ್ತಿಲ್ಲ,” ಎಂದು ತನ್ನ ಗುರುತನ್ನು ಬಹಿರಂಗಪಡಿಸಲು ಬಯಸಿದ ಮತ್ತೋರ್ವ ಮಹಿಳೆ ತಮ್ಮ ಅಳಲನ್ನು ಹಂಚಿಕೊಂಡರು. ನಕ್ಷತ್ರ ಎಂಬ ಹೆಸರಿನ ತ್ರಿಲಿಂಗಿ ಒಮ್ಮೆ ಓರ್ವ ಅನಾಥ ಮಗುವನ್ನು ದತ್ತು ಪಡೆದುಕೊಂಡರು. ನಕ್ಷತ್ರ ಕಲಬುರಗಿಯ ನಿವಾಸಿಯಾಗಿದ್ದು, ೧೬ ವರ್ಷ ವಯಸ್ಸಿನಲ್ಲಿ ತಾನು ತ್ರಿಲಿಂಗ ಎಂಬ ಕಾರಣದಿಂದಾಗಿ ಅವರ ಮನೆ ಹಾಗೂ ಸಮಾಜದಲ್ಲಿ ಅನೇಕ ತೊಂದರೆಗಳನ್ನು ಎದುರಿಬೇಕಾಯಿತು. “ಈಗ ನನಗೆ ಅನಾಥ ಮಕ್ಕಳಿಗೆ ತಾಯಿ ಆಗಬೇಕು ಎಂಬ ಬಯಕೆ ಇದೆ ಅಷ್ಟೇ. ನನಗೆ ಸ್ವತಃ ಮಕ್ಕಳಿಗೆ ಜನ್ಮ ನೀಡುವುದು ಸಾಧ್ಯವಾಗದೇ ಇರುವ ಕಾರಣದಿಂದಾಗಿ ನನ್ನ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಮಕ್ಕಳನ್ನು ದತ್ತು ಪಡೆದು ನೋಡಿಕೊಳ್ಳುತ್ತೇನೆ,” ಎಂದು ನಕ್ಷತ್ರ ಕಿರುನಗೆಯೊಂದಿಗೆ ತಿಳಿಸಿದರು. ಸುದ್ದಿ ಮೂಲ: ಬೆಂಗಳೂರ್ ಮಿರರ್ : - -