‘ಗಂಧದ ಗುಡಿ’ ಚಿತ್ರಕ್ಕೆ ತೆರಿಗೆ ವಿನಾಯಿತಿ ಕೋರಿ ಸಿಎಂಗೆ ಮನವಿ ಬೆಂಗಳೂರು, ಅಕ್ಟೋಬರ್ 21, 2022 (..):ಪುನೀತ್ ರಾಜ್‌ಕುಮಾರ್ ನಟನೆಯ ಕೊನೆಯ ಸಿನಿಮಾ ‘ಗಂಧದ ಗುಡಿ’ ಚಿತ್ರಕ್ಕೆ ತೆರಿಗೆ ವಿನಾಯಿತಿ ಕೋರಿ ಸಿಎಂಗೆ ಮನವಿ ಸಲ್ಲಿಸಲಾಗಿದೆ. ಅಕ್ಟೋಬರ್ 28 ರಂದು ಚಿತ್ರಮಂದಿರಗಳಲ್ಲಿ ‘ಗಂಧದ ಗುಡಿ’ ತೆರೆಗೆ ಬರುತ್ತಿದೆ. ‘ಗಂಧದ ಗುಡಿ’ ಕರ್ನಾಟಕ ರಾಜ್ಯದ ಪ್ರಕೃತಿ ಸಂಪತ್ತು, ರಾಜ್ಯದ ಭವ್ಯ ಸಂಸ್ಕೃತಿಯನ್ನು ಪರಿಚಯಿಸುವ ಪ್ರಯತ್ನ ಮಾಡಲಾಗಿರುವ ಡಾಕ್ಯುಮೆಂಟರಿ ಸಿನಿಮಾ ಆಗಿದೆ. ಈ ಸಿನಿಮಾದ ಬಳಿಕ ಪುನೀತ್ ರಾಜ್‌ಕುಮಾರ್ ಅನ್ನು ಇನ್ಯಾವುದೇ ಹೊಸ ಕತೆ, ಪಾತ್ರಗಳಲ್ಲಿ ತೆರೆಯ ಮೇಲೆ ನೋಡುವ ಅವಕಾಶ ಅಭಿಮಾನಿಗಳಿಗಿಲ್ಲ.ಹೀಗಾಘಿ ಸಿನಿಮಾ ಹೆಚ್ಚು ಮಂದಿಯನ್ನು ತಲುಪಲಿ ಎಂಬ ಉದ್ದೇಶದಿಂದ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ. ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾಮ ಹರೀಶ್, ”ಪಿಆರ್‌ಕೆ ಪ್ರೊಡಕ್ಷನ್‌ನಿಂದ ಸ್ವತಃ ನಿರ್ಮಿಸಿ, ಪುನೀತ್ ರಾಜ್‌ಕುಮಾರ್ ಅಭಿಯಿಸಿರುವ ‘ಗಂಧದ ಗುಡಿ’ ಚಲನಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ’’ ಮನವಿ ಮಾಡಿದ್ದಾರೆ.