ಆ.3ರಂದು ಎರಡು ಪಕ್ಷಗಳಿಂದ ಪಾದಯಾತ್ರೆ: ಹೆಚ್ ಡಿಕೆ ಮನವೊಲಿಸುವಲ್ಲಿ ಬಿಜೆಪಿ ನಾಯಕರು ಸಕ್ಸಸ್ ನವದೆಹಲಿ,ಆಗಸ್ಟ್,1,2024 (..):ಮುಡಾ ಹಗರಣ ವಿರೋಧಿಸಿ ಪಾದಯಾತ್ರೆಯಲ್ಲಿ ಮಾಜಿ ಶಾಸಕ ಪ್ರೀತಂಗೌಡಗೆ ಮುಂದಾಳತ್ವ ನೀಡಲಾಗಿದೆ ಎಂದು ಗರಂ ಆಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಮನವೊಲಿಸುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ. ಇಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಜೊತೆ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ಸಿಂಗ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾತುಕತೆ ನಡೆಸಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಹೆಚ್.ಡಿಕೆ ಜೊತೆ ಸಭೆ ಬಳಿಕ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ಮಾತನಾಡಿದ ರಾಧಾಮೋಹನ್ ಸಿಂಗ್, ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಆಗಸ್ಟ್ 3 ರಂದು ಎರಡು ಪಕ್ಷಗಳಿಂದ ಜಂಟಿ ಪಾದಯಾತ್ರೆ ನಡೆಯಲಿದೆ. 7 ದಿನಗಳ ಪಾದಯಾತ್ರೆಯಲ್ಲಿ ಎರಡು ಪಕ್ಷದ ನಾಯಕರು ಭಾಗಿಯಾಗಲಿದ್ದಾರೆ . ಬಿಜೆಪಿ ಜೆಡಿಎಸ್ ಮಧ್ಯೆ ಯಾವುದೇ ಗೊಂದಲವಿಲ್ಲ. ಪಾದಯಾತ್ರೆಯಲ್ಲಿ ಯಾವುದೇ ವ್ಯಕ್ತಿ ಚಾಲನೆ ನೀಡುವುದಿಲ್ಲ, ಪ್ರೀತಂಗೌಡಗೆ ಮಹತ್ವ ಕೊಟ್ಟಿಲ್ಲ. ಪಾದಯಾತ್ರೆಯಲ್ಲಿ ಪ್ರೀತಂಗೌಡ ಪಾತ್ರ ಇಲ್ಲ ಎಂದು ಘೋಷಣೆ ಮಾಡಿದರು. ಪಾದಯಾತ್ರೆಯ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತದೆ ಎಂದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಶನಿವಾರದಿಂದ ಪಾದಯಾತ್ರೆ ಆರಂಭವಾಗಲಿದೆ. ಬಿಜೆಪಿ ಜೆಡಿಎಸ್ ಸೇರಿ ಮೈಸೂರಿನವರೆಗೆ ಪಾದಯಾತ್ರೆ ನಡೆಸುತ್ತೇವೆ. ಸಂವಹನ ಕೊರತೆಯಿಂದ ಒಂದಷ್ಟು ಗೊಂದಲವಾಗಿದ್ದವು ಯಾವುದೇ ಗೊಂದಲವಿಲ್ಲದೆ ಪಾದಯಾತ್ರೆ ಮಾಡುತ್ತೇವೆ. ಎರಡು ಪಕ್ಷ ಸೇರಿ ಪಾದಯಾತ್ರೆ ಮಾಡುತ್ತೇವೆ ಎಂದರು. : , , , ,