ಮೀಸಲಾತಿ ಹೆಚ್ಚಳ ಮತ್ತು ಭಾರತ್ ಜೋಡೊ ಯಾತ್ರೆಯಿಂದ ನಮಗೆ ಯಾವುದೇ ಎಫೆಕ್ಟ್ ಆಗಲ್ಲ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ. ಮೈಸೂರು,ಅಕ್ಟೋಬರ್,8,2022(..): ಎಸ್ .ಸಿ, ಎಸ್ ಟಿ ಮೀಸಲಾತಿ ಹೆಚ್ಚಳ ಮತ್ತು ಭಾರತ್ ಜೋಡೊ ಯಾತ್ರೆಯಿಂದ ನಮಗೆ ಯಾವುದೇ ಎಫೆಕ್ಟ್ ಆಗಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು. ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ ನಲ್ಲಿ ಮಾಧ್ಯಮಗಳ‌ ಜೊತೆ ಮಾತನಾಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ‌, ಮೀಸಲಾತಿ ಹೆಚ್ಚಳ ವಿಚಾರ, ಇದ್ಯಾವುದು ಚುನಾವಣೆಗೆ ಯಾವ ಪಕ್ಷಕ್ಕೂ ಪ್ಲಸ್ ಆಗಲ್ಲ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಮೀಸಲಾತಿ ದೊರಕಿಸಿಕೊಟ್ಟಿದ್ದರು. ಆ ಕಾರಣಕ್ಕಾಗಿ ಎಂಎಲ್ ಎ, ಎಂಪಿಗಳು ಮೀಸಲಾತಿ ಅವಕಾಶ ಪಡೆದುಕೊಂಡರು. ಆ ಕಾರಣಕ್ಕೆ ವಿಧಾನಸಭೆ , ಲೋಕಸಭೆ ಪ್ರವೇಶ ಮಾಡಿದರು. ಆದರೆ ದೇವೇಗೌಡರನ್ನೇ ನೆನೆಸಿಕೊಳ್ಳುವ ಕೆಲಸ ಆಗಿಲ್ಲ. ಮೀಸಲಾತಿ ಅಷ್ಟೇ ಅಲ್ಲ ಭಾರತ್ ಜೋಡೋ ಯಾತ್ರೆಯಿಂದಲೂ ನಮಗೆ ಯಾವುದೇ ಎಫೆಕ್ಟ್ ಆಗಲ್ಲ. ಜೆಡಿಎಸ್ ಶಕ್ತಿ ಏನೆಂದು ಈ ಚುನಾವಣೆಯಲ್ಲಿ ತೋರಿಸುತ್ತೇವೆ ಎಂದರು. ಟಿಪ್ಪು ಎಕ್ಸ್ ಪ್ರೆಸ್ ಗೆ ಒಡೆಯರ್‌ ಹೆಸರು ನಾಮಕರಣ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ವಿರುದ್ಧ ಗುಡುಗಿದ ಹೆಚ್.ಡಿ ಕುಮಾರಸ್ವಾಮಿ‌, ಅವರನ್ನ ಎಂಪಿ ಮಾಡಿರುವುದು ಹೆಸರು ಬದಲಾವಣೆ ಮಾಡಲು ಅಲ್ಲ. ಇನ್ನೂ ಸಾಕಷ್ಟು ಸಮಸ್ಯೆಗಳು ಜ್ವಲಂತವಾಗಿವೆ. ಅದರ ಬಗ್ಗೆ ಎಂಪಿ‌ ಗಮನ ಹರಿಸಲಿ. ಪ್ರವಾಹಪೀಡಿತರಿಗೆ, ಮಳೆ ಹಾನಿ ಸಂತ್ರಸ್ತರ ಬಗ್ಗೆ ಗಮನ ಹರಿಸಲಿ. ಇದ್ಯಾವುದೋ‌ ಹೆಸರು ಬದಲಿಸಿರುವುದೇ ಮುಖ್ಯವಲ್ಲ ಎಂದು ಟಾಂಗ್ ನೀಡಿದರು. ಗುಬ್ಬಿ ಶಾಸಕ ಶ್ರೀನಿವಾಸ್ ಭಾರತ್ ಜೋಡೋ ಯಾತ್ರೆಗೆ ಸಾಥ್ ನೀಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿಕೆ, ಅವರು ಯಾರು ನಮ್ಮ ಪಕ್ಷದಲ್ಲಿಯೇ ಇಲ್ಲ. ಎರಡು ವರ್ಷದ ಹಿಂದೆಯೇ ನಮ್ಮ ಪಕ್ಷ ಬಿಟ್ಟಿದ್ದಾರೆ ಎಂದರು. : - – – - -