ಬಿಎಂಎಸ್ ಕಾಲೇಜು ಟ್ರಸ್ಟ್ ಜಮೀನು ಅಕ್ರಮ: ತಾಕತ್ತಿದ್ದರೆ ನ್ಯಾಯಾಂಗ ತನಿಖೆ ಮಾಡಿಸಲಿ- ಹೆಚ್.ಡಿಕೆ ಸವಾಲು. ಬೆಂಗಳೂರು,ಸೆಪ್ಟಂಬರ್,23,2022(..):ಬಿಎಂಎಸ್ ಕಾಲೇಜು ಟ್ರಸ್ಟ್ ಜಮೀನು ಅಕ್ರಮದ ಬಗ್ಗೆ ತಾಕತ್ತಿದ್ದರೆ ನ್ಯಾಯಾಂಗ ತನಿಖೆ ಮಾಡಿಸಲಿ ಎಂದು ಸರ್ಕಾರಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸವಾಲು ಹಾಕಿದರು. ಬೆಂಗಳೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಸರ್ಕಾರ ಒಬ್ಬ ವ್ಯಕ್ತಿಗೆ ಈಗಾಗಲೇ ಈ ಟ್ರಸ್ಟ್ ಅನ್ನು ಬರೆದುಕೊಟ್ಟಿದೆ. ಸಾರ್ವಜನಿಕ ಟ್ರಸ್ಟ್‌ ಒಂದು ಕುಟುಂಬಕ್ಕೆ ವರ್ಗಾವಣೆ ಆಗುತ್ತಿದೆ. ಸಚಿವರು ಇದರಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ತನಿಖೆ ಮಾಡೋದಕ್ಕೆ ಸರ್ಕಾರಕ್ಕೆ ಭಯ ಯಾಕೆ? ಎಂದು ಪ್ರಶ್ನಿಸಿದರು. ನಾನು ಈ ಅಕ್ರಮದ ದಾಖಲೆಗಳನ್ನು ಜನರ ಮುಂದೆ ಇಟ್ಟಿದ್ದೇನೆ. ಈ ಪ್ರಕರಣದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ ಅವರಿಗೆ ಕಿಕ್​​​ಬ್ಯಾಕ್ ಹೋಗಿದೆ. ಅಕ್ರಮದ ಬಗ್ಗೆ ಅಶ್ವತ್ಥ್ ನಾರಾಯಣ ಸಾಕ್ಷಿ ಕೊಡಿ ಎಂದು ಹೇಳುತ್ತಾರೆ. ಸಾಕ್ಷಿಗಾಗಿ ನಾನು ದುರ್ಬಿನ್ ಹಾಕಿಕೊಂಡು ಕುಳಿತುಕೊಳ್ಳಲು ಆಗುತ್ತಾ? ಅವರ ಪಕ್ಷದಲ್ಲೇ ಅಶ್ವತ್ಥ್ ನಾರಾಯಣ ಬಗ್ಗೆ ಮಾತನಾಡುತ್ತಾರೆ. ಯಾವುದೇ ಸಚಿವರು, ಶಾಸಕರು ಅಶ್ವತ್ಥ್ ನಾರಾಯಣ ಪರ ನಿಂತಿಲ್ಲ ಎಂದು ಹೆಚ್.ಡಿಕೆ ಟಾಂಗ್ ನೀಡಿದರು. ಹಗರಣ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರಿಗೂ ಪತ್ರ ಬರೆಯುತ್ತೇನೆ. ಎಲ್ಲಾ ದಾಖಲೆಗಳನ್ನು ಪ್ರಧಾನಿಗಳಿಗೆ ಕಳುಹಿಸಿಕೊಡುತ್ತೇನೆ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. : – –- - –