ಆರ್ ಟಿಐ ಮಾಹಿತಿ ನೀಡದ ಆರೋಪ: ಗ್ರಾ.ಪಂ ಕಾರ್ಯದರ್ಶಿಗೆ 5 ಸಾವಿರ ರೂ. ದಂಡ. ಮೈಸೂರು,ಆಗಸ್ಟ್,25,2022(..): ಗ್ರಾಮ ಪಂಚಾಯತ್ ಕಚೇರಿಯ ಸಿಸಿ ಟಿವಿ ಫೂಟೇಜ್ ಗೆ ಸಂಬಂಧಿಸಿದ ಮಾಹಿತಿಯನ್ನ ಕೇಳಿದ ಆರ್ ಟಿಐ ಕಾರ್ಯಕರ್ತ ರವೀಂದ್ರ ಅವರಿಗೆ ಮಾಹಿತಿ ನೀಡದೆ ವಿಳಂಬ ಮಾಡಿದ ಮೈಸೂರು ಜಿಲ್ಲೆ ಹೊಸಹುಂಡಿ ಗ್ರಾಮಪಂಚಾಯಿತಿ ಕಾರ್ಯದರ್ಶಿಗೆ ಕರ್ನಾಟಕ ಮಾಹಿತಿ ಆಯೋಗ 5 ಸಾವಿರ ರೂ. ದಂಡವಿಧಿಸಿದೆ. ಆರ್ ಟಿಐ ರವೀಂದ್ರ ಅವರು ಹೊಸಹುಂಡಿ ಗ್ರಾಮಪಂಚಾಯಿತಿ ಕಚೇರಿಯ 15-3-2021 ರಿಂದ 16 -04-2021ರವರೆಗಿನ ಸಿಸಿ ಟಿವಿ ಫೂಟೇಜ್ ನ ವಿಡಿಯೋ ಗಳ ಮಾಹಿತಿಯನ್ನ ಸಿಡಿ ರೂಪದಲ್ಲಿ ನೀಡುವಂತೆ ಗ್ರಾಮಪಂಚಾಯಿತಿ ಕಾರ್ಯದರ್ಶಿ ಹಾಗೂ ಸಾವರ್ಜನಿಕ ಮಾಹಿತಿ ಅಧಿಕಾರಿ ವೆಂಕಟೇಶ್ ಅವರಿಗೆ ಮನವಿ ಮಾಡಿದ್ದರು. ಆದರೆ ಸಾರ್ವಜನಿಕ ಮಾಹಿತಿ ಅಧಿಕಾರಿ ವೆಂಕಟೇಶ್ ಮಾಹಿತಿ ಒದಗಿಸದ ಹಿನ್ನೆಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮೇಲ್ಮನವಿ ಸಲ್ಲಿಸಿದ್ದು ಇದು ಪ್ರಯೋಜನವಾಗಲಿಲ್ಲ. ಹೀಗಾಗಿ ಆರ್ ಟಿಐ ಕಾರ್ಯಕರ್ತ ರವೀಂದ್ರ ಅವರು ಕರ್ನಾಟಕ ಮಾಹಿತಿ ಆಯೋಗಕ್ಕೆ ಅಪೀಲು ಹಾಕಿದ್ದರು. ನಂತರ ವಿಚಾರಣೆ ನಡೆಸಿದ ಮಾಹಿತಿ ಆಯೋಗ, ಅರ್ಜಿದಾರರಿಗೆ 15 ದಿನಗಳೊಳಗಾಗಿ ಕೇಳಿರುವ ಮಾಹಿತಿಯನ್ನ ಉಚಿತವಾಗಿ ಒದಗಿಸಿ ಮುಂದಿನ ವಿಚಾರಣೆ ದಿನದಂದು ಖುದ್ದು ಹಾಜರಾಗಿ ಅರ್ಜಿದಾರರಿಗೆ ಮಾಹಿತಿ ಒದಗಿಸಿದ ಬಗ್ಗೆ ವಿವರಣೆ ಸಲ್ಲಿಸಬೇಕು ಎಂದು ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಪಟ್ಟಣ ಪಂಚಾಯತಿ, ಕಡಕೊಳ ಮೈಸೂರು ತಾಲ್ಲೂಕು, ಮೈಸೂರು ಜಿಲ್ಲೆ ಇವರಿಗೆ ನಿರ್ದೇಶನ ನೀಡಿತ್ತು. ಅಲ್ಲದೆ ಮಾಹಿತಿ ನೀಡಲು ವಿಳಂಬ ಮಾಡಿದ್ದಕ್ಕೆ ಏಕೆ ದಂಡ ವಿಧಿಸಬಾರದು ಎಂಬ ಬಗ್ಗೆ ಲಿಖಿತ ಸಮಾಜಾಯಿಷಿ ನೀಡಬೇಕೆಂದು ಹಿಂದಿನ ಸಾವರ್ಜನಿಕ ಮಾಹಿತಿ ಅಧಿಕಾರಿ ಹಾಗೂ ಹೊಸಹುಂಡಿ ಗ್ರಾಪಂ ಕಾರ್ಯದರ್ಶಿ ವೆಂಕಟೇಶ್ ಗೆ ಮಾಹಿತಿ ಆಯೋಗ ಸೂಚಿಸಿತ್ತು. ಆದರೂ ಸಹ ಸೂಕ್ತ ಕಾರಣ ನೀಡದೆ ವಿಚಾರಣೆಗೆ ಗೈರು ಹಾಜರಾದ ಹಿನ್ನೆಲೆ ಹೊಸಹುಂಡಿ ಗ್ರಾಮಪಂಚಾಯತ್ ಕಾರ್ಯದರ್ಶಿ ವೆಂಕಟೇಶ್ ಅವರಿಗೆ 5 ಸಾವಿರ ರೂ ದಂಡ ವಿಧಿಸಿ ರಾಜ್ಯ ಮಾಹಿತಿ ಆಯುಕ್ತ ಎಸ್.ಎಲ್ ಪಾಟೀಲ್ ದಂಡ ವಿಧಿಸಿದ್ದಾರೆ. : - - - - 5 -. -