ಮುಡಾ ಹಗರಣ: ಸಾರ್ವಜನಿಕ ಚರ್ಚೆಗೆ ಬರುವಂತೆ ನಾಳೆ ಬಿವೈ ವಿಜಯೇಂದ್ರಗೆ ಕೆ.ಎಸ್ ಶಿವರಾಮು ಆಹ್ವಾನ ಮೈಸೂರು,ಜುಲೈ,25,2024 (..):ಮುಡಾ ಪ್ರಕರಣ ಸಂಬಂಧ 2021 ರಲ್ಲಿ ಮುಡಾದಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರ ಕುರಿತು ಸಾರ್ವಜನಿಕ ಚರ್ಚೆಗೆ ಬರುವಂತೆ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಪತ್ರ ಚಳವಳಿಯ ಮೂಲಕ ನಾಳೆ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್ ಶಿವರಾಮು ಆಹ್ವಾನ ನೀಡಲಿದ್ದಾರೆ. ಈ ಕುರಿತು ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಕೆ.ಎಸ್ ಶಿವರಾಮು ಅವರು, ನಾಳೆ ಬೆಳಿಗ್ಗೆ 11.30ಕ್ಕೆ ಮೈಸೂರು ಮಹಾನಗರ ಪಾಲಿಕೆ ಕಚೇರಿ ಅಂಚೆ ಪೆಟ್ಟಿಗೆ ಎದುರು ಪತ್ರ ಚಳವಳಿ ನಡೆಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ರಾಜಕೀಯ ಹುನ್ನಾರ ಮಾಡುತ್ತಿವೆ. ಹೇಗಾದರೂ ಮಾಡಿ ಸಿದ್ದರಾಮಯ್ಯರವರ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವುದು ಹಾಗೂ ಅವರನ್ನು ಮುಖ್ಯಮಂತ್ರಿಯ ಹುದ್ದೆಯಿಂದ ಕೆಳಗಿಳಿಸುವ ಹುನ್ನಾರ ಮಾಡುತ್ತಿದೆ. ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಕೇಂದ್ರ ಬಿಜೆಪಿ ನಾಯಕರು ವಿಜಯೇಂದ್ರ ಅವರಿಗೆ ಸುಪಾರಿ ಕೊಟ್ಟಿದ್ದಾರೆ. ಆ ಸುಪಾರಿಯಂತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಜೆಡಿಎಸ್ ಮುಖಂಡರು ಜೊತೆಗೂಡಿ ಸಿದ್ದರಾಮಯ್ಯ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಆದ್ದರಿಂದ 2021 ರಲ್ಲಿ ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ಅವರ ಪುತರ ಹಾಗೂ ರಾಜ್ಯ ಬಿಜೆಪಿಯ ಉಪಾಧ್ಯಧ್ಯಕ್ಷರಾಗಿದ್ದ ಬಿ.ವೈ.ವಿಜಯೇಂದ್ರ ಅವರು 2021 ರಲ್ಲಿ ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಅದರ ವಿರುದ್ಧ ಹತ್ತು ಹಲವಾರು ಹೋರಾಟಗಳನ್ನು ನಮ್ಮ ವೇದಿಕೆ ಮಾಡಿದೆ. ಆದರೂ ಕೂಡ ಈ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ಆಗಿನ ಸರ್ಕಾರದ ಮುಖ್ಯಮಂತ್ರಿಗಳಾಗಲಿ, ವಿಜಯೇಂದ್ರ ಅವರಾಗಲಿ ಧ್ವನಿ ಎತ್ತಲಿಲ್ಲ. ಕಾರಣ ಆ ಎಲ್ಲಾ ಭ್ರಷ್ಟಾಚಾರದ ರೂವಾರಿ ವಿಜಯೇಂದ್ರ ಮತ್ತು ಅವರ ಪಟಾಲಂ. ಹೀಗಾಗಿ 2021ರ ಭ್ರಷ್ಟಾಚಾರ ಕುರಿತಂತೆ ದಿನಾಂಕ 26.07.2024ರ ಬೆಳಿಗ್ಗೆ 11.30 ಗಂಟೆಗೆ ಮೈಸೂರಿನ ಮಹಾನಗರ ಪಾಲಿಕೆಯ ಮುಂಭಾಗದ ಅಂಚೆಪಟ್ಟಿಗೆ ಎದುರು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಆಹ್ವಾನಿಸಿ ಪತ್ರ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆ.ಎಸ್ ಶಿವರಾಮ್ ತಿಳಿಸಿದ್ದಾರೆ. : , , ,