: ಮುಖ್ಯಮಂತ್ರಿ ದಾರಿ ತಪ್ಪಿಸಿದ ಪಿನ್‌ ಟು ಪಿನ್‌ ಮಾಹಿತಿ.. . 14 ’ 40-- . ಮೈಸೂರು, ಅ.01,2024: (..): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾಲಿಗೆ “ಮುಡಾ” ನಿವೇಶನ ಮಂಜೂರು ಪ್ರಕರಣ ಈಗ ಸಂಕಷ್ಠಕ್ಕೆ ಈಡುಮಾಡಿದೆ. ಮಡದಿ ಪಾರ್ವತಿ ಅವರ ಹೆಸರಿಗೆ ಮಂಜೂರಾದ ೧೪ ಸೈಟುಗಳು ಸಿದ್ದರಾಮಯ್ಯ ಅವರ ನಲ್ವತ್ತು ವರ್ಷಗಳ ರಾಜಕೀಯ ಜೀವನದ ವರ್ಚಸ್ಸಿಗೆ ಕಪ್ಪುಚುಕ್ಕೆಯಂತಾಗಿದೆ. ಈ ಹಗರಣ ಬೆಳಕಿಗೆ ಬಂದ ಆರಂಭದಲ್ಲೇ ಸುಲಭವಾಗಿ ಪಾರಾಗಬಹುದಾಗಿತ್ತು. ನಿವೇಶನ ಹಂಚಿಕೆ ಬಗ್ಗೆ ನನಗೆ ಮಾಹಿತಿ ಇಲ್ಲ. ಇದು ಮಡದಿ ಮತ್ತು ಆಕೆಯ ಸಹೋದರನ ನಡುವಿನದ್ದು ಎಂದು ಸ್ಪಷ್ಟನೆ ನೀಡಿದ್ದ ಸಿಎಂ ಸಿದ್ದರಾಮಯ್ಯ, ಆರೋಪ ಕೇಳಿ ಬಂದ ಆರಂಭದಲ್ಲೇ ನಿವೇಶನಗಳನ್ನು ಹಿಂದಿರುಗಿಸಿ ಕೋರ್ಟ್‌ ಮೊರೆ ಹೋಗುವುದಾಗಿ ಹೇಳಿದ್ದರೆ ಪ್ರಕರಣ ಬೇರೆಯದೆ ತಿರುವು ಪಡೆಯುತ್ತಿತ್ತು. ಆದರೆ ಇದೀಗ ಸಿಎಂ ಸಿದ್ದರಾಮಯ್ಯ ಅವರಿಗೆ ಈ ಹಗರಣ ಕಂಟಕವಾಗಿ ಪರಿಣಮಿಸಿದೆ. ವಿಪಕ್ಷಗಳು ಇದನ್ನೇ ಅಸ್ತ್ರವನ್ನಾಗಿಸಿ ಸಿದ್ದರಾಮಯ್ಯ ಅವರನ್ನು ಹಣಿಯಲು ಮುಂದಾಗಿವೆ. ನಿವೇಶನ ಹಂಚಿಕೆ ಆರೋಪ ಕೇಳಿ ಬಂದ ಆರಂಭದಲ್ಲೇ ನಿವೇಶನ ಹಿಂದಿರುಗಿಸುವಂತೆ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಬಹುದಿತ್ತು. ಬದಲಿಗೆ ಸಚಿವ ಬೈರತಿ ಸುರೇಶ್‌, ಸಿದ್ದರಾಮಯ್ಯ ಅವರನ್ನು ಮೊದಲಿಗೆ ದಾರಿ ತಪ್ಪಿಸಿದರು. ಅಷ್ಟು ಮಾತ್ರವಲ್ಲದೆ, ಸಿಎಂ ಹಿಂದೆ ನಿಂತು ೧೪ ನಿವೇಶನಗಳಿಗೆ ಬದಲಾಗಿ ೬೪ ಕೋಟಿ ರೂ. ಪರಿಹಾರ ಕೊಡಿಸಲಿ ಎಂದು ಹೇಳಿಸಿದ್ದು ಬ್ಲಂಡರ್‌ ಮಿಸ್ಟೇಕ್.‌ ರಾಜ್ಯದ ಒರ್ವ ಮುಖ್ಯಮಂತ್ರಿ ಬಾಯಲ್ಲಿ ಈ ರೀತಿ ಕೇಳುವಂತೆ ಪ್ರಚೋಧಿಸಿದ್ದು ದೊಡ್ಡ ಎಡವಟ್ಟು. ರಾಜಕಾರಣಿಗಳಿರಲಿ ಜನ ಸಾಮಾನ್ಯರು ಸಹ ಸಿದ್ದರಾಮಯ್ಯ ಅವರಿಂದ ಈ ನಡೆ ನಿರೀಕ್ಷಿಸದೆ ಆಶ್ಚರ್ಯಗೊಂಡರು. ಬಳಿಕ ಕಾನೂನು ಸಲಹೆಗಾರರಾದ ಪೊನ್ನಣ್ಣ ಸಹ ಮುಡಾ ಪ್ರಕರಣ ಹಳ್ಳ ಹಿಡಿಯಲು ದೊಡ್ಡ ಮಟ್ಟದ ಕೊಡುಗೆ ನೀಡಿದರು. ರಾಜ್ಯಪಾಲರು ತನಿಖೆಗೆ ಸೂಚಿಸಿದ್ದನ್ನು ಕೋರ್ಟ್‌ ನಲ್ಲಿ ಪ್ರಶ್ನಿಸುವ ಮೂಲಕ ಇಡೀ ಪ್ರಕರಣದ ಹಾದಿಯೇ ಬದಲಾಯಿತು. ರಾಜ್ಯಪಾಲರ ಸೂಚನೆಯಂತೆ ಸರಕಾರವೇ ಲೋಕಾಯುಕ್ತರಿಗೆ ಇದರ ತನಿಖೆ ಜವಾಬ್ದಾರಿ ವಹಿಸಿದ್ದರೆ ಇಷ್ಟೊಂದು ಗೋಜಲಾಗುತ್ತಿರಲಿಲ್ಲ. ಕೋರ್ಟ್‌ ಮೊರೆ ಹೋಗುವ ಮೂಲಕ ಹಗ್ಗದಿಂದ ಖುದ್ದು ಕೈಕಟ್ಟಿಸಿಕೊಂಡರು. ಸಿಎಂ ಸಿದ್ದರಾಮಯ್ಯ ಅವರ ನ್ಯಾಯಾಲಯದಲ್ಲಿ ಅಖಾಡಕ್ಕಿಳಿದ ಮಾಜಿ ಅಡ್ಕೋಕೇಟ್‌ ಜನರಲ್‌ ರವಿವರ್ಮ ಕುಮಾರ್‌ ಸಹ ಎಡವಿದರು. ನಿವೇಶನ ಹಂಚಿಕೆ ಆರೋಪಕ್ಕೆ ಸಂಬಂದಿಸಿದಂತೆ ವಾದಿಸಬೇಕಾಗಿದ್ದವರು ರಾಜ್ಯಪಾಲರ ಆದೇಶ ಹಾಗೂ ಅವರ ವಿರುದ್ಧವೇ ಆರೋಪಗಳನ್ನು ಮಾಡುವ ಮೇಲೆಯೇ ಹೆಚ್ಚು ಗಮನ ಹರಿಸಿದ್ದು ಆರೋಪದಿಂದ ಸಿದ್ದರಾಮಯ್ಯ ಅವರು ಹೊರ ಬರಲು ನೆರವಾಗಲಿಲ್ಲ. ವಾದ- ವಿವಾದ ಆಲಿಸಿ ಕಡೆಗೆ ನ್ಯಾಯಾಧೀಶರಾದ ನಾಗ ಪ್ರಸನ್ನ ಅವರು ರಾಜ್ಯಪಾಲರ ಆದೇಶ ಎತ್ತಿ ಹಿಡಿದು ತನಿಖೆಗೆ ಆದೇಶಿಸಿದರು. ಈ ಆದೇಶವನ್ನು ಪ್ರಶ್ನಿಸಿ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಬೇಕಾಗಿದ್ದ ಸಿದ್ದರಾಮಯ್ಯ ಪರ ಕಾನೂನು ಪಂಡಿತರು, ಆದೇಶ ಬಂದು ವಾರ ಕಳೆದರು ಅರ್ಜಿ ಸಲ್ಲಿಸದೆ ನಿರ್ಲಕ್ಷ್ಯ ಪ್ರದರ್ಶಿಸಿದರು. ಸರ್ಟಿಫೈಡ್‌ ಕಾಪಿ ಸಿಕ್ಕಿಲ್ಲ ಎಂಬ ಕುಂಟು ನೆಪ ಹೇಳುತ್ತಲೇ ಪ್ರಕರಣ ಹಳ್ಳ ಹತ್ತಿಸಿದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಮರೀಗೌಡ ಹಾಗೂ ಸಿದ್ದರಾಮಯ್ಯ ಆಪ್ತ ವಲಯದ ರಾಕೇಶ್‌ ಪಾಪಣ್ಣ ನಡುವಿನ ಮುಸುಕಿನ ಗುದ್ದಾಟವೇ ಹಗರಣದ ಮೂಲ ಎಂಬುದು ಕಾಂಗ್ರೆಸ್‌ ಸ್ಥಳೀಯ ಮುಖಂಡರು ಹಾಗೂ ಸಿದ್ದರಾಮಯ್ಯ ಅಪ್ಪಟ್ಟ ಅಭಿಮಾನಿಗಳ ಆರೋಪ. ಈ ಸಲುವಾಗಿಯೇ ಕಳೆದ ವಾರ ಸಿಎಂ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಲು ಮೈಸೂರು ವಿಮಾನ ನಿಲ್ದಾಣಕ್ಕೆ ತೆರಳಿದ್ದ ಕೆ.ಮರೀಗೌಡ ವಿರುದ್ಧ ಸಿದ್ದರಾಮಯ್ಯ ಬೆಂಬಲಿಗರು ಆಕ್ರೋಶ ಹೊರ ಹಾಕಿ ಅಟ್ಟಾಡಿಸಿದರು. ಕಡೆಗೆ ಇಷ್ಟೆಲ್ಲಾ ರಂಪ-ರಾಮಾಯಣವಾದ ಮೇಲೆ ಸಿದ್ದರಾಮಯ್ಯ ಅವರ ಮಡದಿ, ಮುಡಾಗೆ ಪತ್ರ ಬರೆದು ನಿವೇಶನ ಹಿಂದಕ್ಕೆ ಪಡೆಯುವಂತೆ ಕೋರಿದ್ದು ಮತ್ತೊಂದು ಎಡವಟ್ಟು. ಲೋಕಾಯುಕ್ತದಲ್ಲಿ ಎಫ್ಐಆರ್‌ ಹಾಗೂ ಈಡಿ ಯಲ್ಲಿ ಪ್ರಕರಣ ದಾಖಲಾದ ಮೇಲೆ ನಿವೇಶನ ಹಿಂದಿರುಗಿಸುವಂತೆ ಸಲಹೆ ನೀಡಿದ ಪುಣ್ಯಾತ್ಮ ಯಾರು ಎಂದು ಪ್ರಶ್ನಿಸುವಂತಾಗಿದೆ. ಒಟ್ಟಾರೆ ಸಿದ್ದರಾಮಯ್ಯ ಅವರ ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿ ಅವರ ಶುಭ್ರ ಚಾರಿತ್ರ್ಯಕ್ಕೆ ಕಪ್ಪು ಮಸಿ ಬಳಿದಂತಾಗಿದೆ ಈ ಮುಡಾ ಹಗರಣ. : , , : . 14 ’ 40-- .