ಎಸಿಬಿ ಪ್ರಕರಣ ವಿಚಾರಣೆ ಮೂರು ದಿನ ಮುಂದೂಡಲು ಹೈಕೋರ್ಟ್ ಗೆ ಸುಪ್ರೀಂ ಕೋರ್ಟ್ ನಿರ್ದೇಶನ ನವದೆಹಲಿ,ಜುಲೈ,12,2022(..): ಎಸಿಬಿ ಕೇಸ್ ವಿಚಾರಣೆಯನ್ನು ಮೂರು ದಿನ ಮುಂದೂಡಲು ಕರ್ನಾಟಕ ಹೈಕೋರ್ಟ್ ಜಡ್ಜ್ ಎಚ್.ಪಿ.ಸಂದೇಶ್ ಅವರಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.. ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ಲಂಚ ಪ್ರಕರಣದಲ್ಲಿ ನ್ಯಾ.ಎಚ್.ಪಿ. ಸಂದೇಶ್ ಭ್ರಷ್ಟಾಚಾರ ನಿಗ್ರಹ ದಳದ ವಿರುದ್ಧ ಹಾಗೂ ತಮ್ಮ ವಿರುದ್ಧ ಭಾರಿ ಟೀಕೆ ಮಾಡಿರುವುದನ್ನು ಪ್ರಶ್ನಿಸಿ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಸಲ್ಲಿಸಿರುವ ಅರ್ಜಿ ಇಂದು ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯಪೀಠದ ಮುಂದೆ ವಿಚಾರಣೆ ನಡೆಯಿತು. ಪ್ರಕರಣದ ಸಂಬಂಧ ಜು.11ರಂದು ನ್ಯಾ.ಸಂದೇಶ್ ಅವರು ಹೊರಡಿಸಿರುವ ಪ್ರತಿ ಇನ್ನೂ ಲಭ್ಯವಾಗದ ಕಾರಣ ಮೂರು ದಿನ ಎಸಿಬಿ ವಿಚಾರ ಕುರಿತ ವಿಚಾರಣೆಯನ್ನು ಮುಂದೂಡುವಂತೆ ಸೂಚಿಸಿರುವ ಸಿಜೆಐ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ. ಅರ್ಜಿದಾರರ ಪರ ವಾದ ಆಲಿಸಿದ ಬಳಿಕ ನ್ಯಾಯಪೀಠ, “ನಾವು ನ್ಯಾಯಮೂರ್ತಿ ಜು.11ರಂದು ಹೊರಡಿಸಿರುವ ಆದೇಶವನ್ನು ಪರಿಶೀಲಿಸಬೇಕಿರುವುದರಿಂದ ವಿಚಾರಣೆಯನ್ನು ಮೂರು ದಿನ ಮುಂದೂಡುವಂತೆ ನ್ಯಾ.ಎಚ್.ಪಿ.ಸಂದೇಶ್ ಅವರಿಗೆ ಸೂಚಿಸಲಾಗುವುದು ಎಂದು ತಿಳಿಸಿ ವಿಚಾರಣೆ ಮುಂದೂಡಿತು. : -- - –-