ರಾಜೀನಾಮೆಗೆ ಆಗ್ರಹಿಸಿದ ಸಿದ್ಧರಾಮಯ್ಯಗೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ. ಮೈಸೂರು,ಜುಲೈ,6,2022(..): ಪಿಎಸ್‌ ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದ ಸಿಎಂ, ಗೃಹಸಚಿವರು ಹೇಗೆ ಅಧಿಕಾರದಲ್ಲಿ ಮುಂದುವರೆಯುತ್ತಾರೆ ಎಂದು ಹೇಳಿಕೆ ನೀಡಿದ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ‌ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಸಿದ್ಧರಾಮಯ್ಯ ಹೇಳಿಕೆ ಕುರಿತು ಮೈಸೂರಿನಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ನೋಡಿದ್ರೆ ನನಗೆ ತುಂಬಾ ಕನಿಕರ ಬರುತ್ತೆ‌. ದಕ್ಷ ಆಡಳಿತಗಾರ ಎನ್ನುವ ಸಿದ್ದರಾಮಯ್ಯನವರು ಹಿಂದೆ‌ ಡಿಜಿಪಿಯೊಬ್ಬರ ಕೇಸನ್ನ ಮುಚ್ಚಿ ಹಾಕಿಲ್ವ. 18 ಕೋಟಿ ಅವ್ಯವಹಾರ ನಡೆಸಿದ್ದಾರೆ ಎಂದು ಎಫ್‌ ಐಆರ್ ದಾಖಲಾಗಿತ್ತು. ಆದರೂ ಆ ಅಧಿಕಾರಿಯನ್ನ ಬಂಧಿಸಿದ್ರಾ..? ಎಂದು ಪ್ರಶ್ನಿಸಿದರು. ನಮ್ಮ ಸರ್ಕಾರ ಭ್ರಷ್ಟಾಚಾರ ಕಂಡು ಬಂದ ಕೂಡಲೇ ಎಡಿಜಿಪಿಯನ್ನ ಬಂಧಿಸಿದ್ದೇವೆ. ಹಿಂದೆ ಭ್ರಷ್ಟಾಚಾರ ಮುಚ್ಚಿಹಾಕುವ ಸರ್ಕಾರ ಇತ್ತು. ಈಗ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಸರ್ಕಾರ ಇದೆ ಎಂದು ಸಿಎಂ ಬೊಮ್ಮಾಯಿ ಟಾಂಗ್ ನೀಡಿದರು. : – - –-