ಕಬ್ಬಿನ ದರ ನಿಗದಿಗೆ ಆಗ್ರಹಿಸಿ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ರೈತರಿಂದ ಪ್ರತಿಭಟನೆ. ಮೈಸೂರು,ಜುಲೈ,4,2022(..):ಪ್ರಸಕ್ತ ಸಾಲಿನ ಕಬ್ಬಿನ ದರ ನಿಗದಿ ಹಾಗೂ ಕಬ್ಬು ಕಟಾವು ಸಾಗಾಣಿಕೆ ದರ ಶೋಷಣೆ ನಿಯಂತ್ರಿಸಲು ಒತ್ತಾಯಿಸಿ ರೈತರು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಬಗಾದಿ ಗೌತಮ್ ಗೆ ಒತ್ತಾಯ ಪತ್ರ ಸಲ್ಲಿಸಿ 15 ದಿನಗಳ ಗಡುವು ನೀಡಿದರು. ಕಬ್ಬಿನ ಬೆಳೆಗೆ ಬಳಸುವ ರಸಗೊಬ್ಬರ, ಬೀಜ, ಡೀಸೆಲ್, ಬೆಲೆ, ಕಟಾವು ಕೂಲಿ ಸಾಗಾಣಿಕೆ ವೆಚ್ಚ ಏರಿಕೆಯಾಗಿರುವ ಕಾರಣ ಪ್ರಸಕ್ತ ಸಾಲಿನ 2022 -23ರ ಸಾಲಿಗೆ ಕಬ್ಬಿನ ದರ ನಿಗದಿ ಮಾಡಬೇಕು. ಉತ್ತರಪ್ರದೇಶದಲ್ಲಿ ರಾಜ್ಯ ಸಲಹಾ ಬೆಲೆ ಟನ್ ಗೆ ಕನಿಷ್ಠ 3500 ನಿಗದಿಪಡಿಸಲಾಗಿದೆ ಅದೇ ಮಾನದಂಡ ಅನುಸರಿಸಿ ರಾಜ್ಯದಲ್ಲಿಯೂ ದರ ನಿಗದಿಪಡಿಸಬೇಕು. ರಾಜ್ಯದಲ್ಲಿ ಕಳೆದ ವರ್ಷ ಸುಮಾರು 70 ಸಕ್ಕರೆ ಕಾರ್ಖಾನೆಗಳು 6ಕೋಟಿ 50 ಲಕ್ಷದಷ್ಟು ಕಬ್ಬು ನುರಿಸಿವೆ ಇವರ ಬಾಬ್ತು ರಾಜ್ಯದ ರೈತರಿಗೆ ಇನ್ನೂ 300 ಕೋಟಿಯಷ್ಟು ಎಪ್ ಆರ್ ಪಿ ಹಣ ಬಾಕಿ ಉಳಿದಿದೆ. ಬಾಕಿ ಹಣಕ್ಕೆ ಕಾನೂನು ಪ್ರಕಾರ ಶೇಕಡ 15 ಬಡ್ಡಿ ಸೇರಿಸಿ ತಕ್ಷಣವೇ ಕೊಡಿಸಬೇಕು ಎಂದು ಆಗ್ರಹಿಸಿದರು. ಪ್ರಸಕ್ತ ಸಾಲಿನಲ್ಲಿ ಕಬ್ಬಿನ ಇಳುವರಿ ಹಾಗೂ ಪ್ರದೇಶ ಏರಿಕೆಯಾಗಿದೆ ಈಗಾಗಲೇ ಕಬ್ಬು ನುರಿಸುವ ಕಾರ್ಯ ಬಣ್ಣಾರಿ ಸಕ್ಕರೆ ಕಾರ್ಖಾನೆ ಆರಂಭಿಸಿದ್ದಾರೆ. ಕಬ್ಬು ದರ ನಿಗದಿ ವಿಳಂಬ ವಾಗುವುದರಿಂದ ಕಾರ್ಖಾನೆಗಳು ರೈತರಿಗೆ ಹಣ ಪಾವತಿ ಕೂಡ ವಿಳಂಬವಾಗುತ್ತದೆ. ಆದ್ದರಿಂದ ತಾವು ಕೂಡಲೇ ತುರ್ತು ಕ್ರಮ ಕೈಗೊಳ್ಳಬೇಕು ಎಸ್ ಎ ಪಿ ಕಾಯ್ದೆ ಪ್ರಕಾರ ರಾಜ್ಯ ಸರ್ಕಾರಕ್ಕೆ ಕಬ್ಬಿನ ಬೆಲೆ ನಿಗದಿ ಮಾಡಲು ಅವಕಾಶವಿರುತ್ತದೆ ಎಂಬುದನ್ನು ಮನಗಂಡು ತಕ್ಷಣವೇ ದರ ನಿಗದಿಪಡಿಸಬೇಕು. ಪ್ರತಿಭಟನಾ ಧರಣಿಯ ನೇತೃತ್ವವಹಿಸಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಇಂದಿನ ದಿನಗಳಲ್ಲಿ ಕಬ್ಬು ಕಲ್ಪವೃಕ್ಷ ವಾಗಿದೆ ಕಬ್ಬಿನಿಂದ ಎಥನಾಲ್,ವಿದ್ಯುತ್, ಮಧ್ಯ, ಗೊಬ್ಬರ, ಮತ್ತಿತರ ಉತ್ಪನ್ನಗಳನ್ನು ತಯಾರಿಸಿ ಕಾರ್ಖಾನೆಗಳು ಹೆಚ್ಚು ಹಣ ಸಂಪಾದಿಸುತ್ತೇವೆ. ಆದರೆ ರೈತರನ್ನು ನಿರಂತರವಾಗಿ ಶೋಷಣೆ ಮಾಡುತ್ತಿವೆ ಕಬ್ಬನ್ನು ನುರಿಸುವ ರೀತಿ ರೈತರನ್ನು ಆರೆಯುತ್ತಿದ್ದಾರೆ ಇದು ನಿಲ್ಲಬೇಕಾದರೆ ಎರಡು ಜಿಲ್ಲೆಯಲ್ಲಿ 25000 ಕಬ್ಬು ಬೆಳೆಯುವ ಎಲ್ಲ ರೈತರು ಸಂಘಟನೆಯ ಅಡಿಯಲ್ಲಿ ಹೋರಾಟಕ್ಕೆ ಬರಬೇಕು. ಆಗ ಮಾತ್ರ ನ್ಯಾಯ ಸಿಗಲು ಸಾಧ್ಯ, ಸರ್ಕಾರವನ್ನು ಮಣಿಸಲು ಸಾಧ್ಯ ಎಂದರು. ಸರ್ಕಾರ ಸಕ್ಕರೆ ಕಾರ್ಖಾನೆ ಮಾಲೀಕರ ಶಕ್ತಿಯನ್ನ ಬಗ್ಗುಬಡಿದು ರೈತರಿಗೆ ನ್ಯಾಯ ಕೊಡಿಸಲು ವಿಫಲವಾಗುತ್ತಿದೆ. ರೈತಶಕ್ತಿ ಎದ್ದು ನಿಂತರೆ ಖಂಡಿತ ನ್ಯಾಯ ಸಿಗುತ್ತದೆ. ಇತ್ತೀಚೆಗೆ ಮಂತ್ರಿಗಳು ವಿರೋಧಪಕ್ಷಗಳ ಮುಖಂಡರು ಹಸಿರು ಶಾಲು ಹಾಕಿ ರೈತರ ಪರ ಎಂದು ರೈತರ ಕಣ್ಣಿಗೆ ಮಣ್ಣೆರೆಚುವ ಕಾರ್ಯ ಮಾಡುತ್ತಿರುವುದನ್ನು ಗಮನಿಸಿದ, ಕೆಲವೊಂದು ರಿಯಲ್ ಎಸ್ಟೇಟ್,ಜೂಜು, ಮಾಫಿಯಾದವರು, ರಸಗೊಬ್ಬರ ಕೀಟನಾಶಕ ಬೀಜ ಕೃಷಿ ಉಪಕರಣ ತಯಾರಿಸುವ ಉದ್ದಿಮೆದಾರರು ಕೂಡ ಹಸಿರು ಟವೆಲ್ ಹಾಕಿ ರೈತರ ಹೆಸರು ಹೇಳಿಕೊಂಡು ದ್ರೋಹ ಬಗೆಯುವ ಕಾರ್ಯ ಮಾಡುತ್ತಿದ್ದಾರೆ. ರೈತ ಸಂಘದ ಸಿದ್ಧಾಂತ ಮಹತ್ವ ಹರಿಯದ ಕೆಲವರು ಹಸಿರು ಶಾಲು ಹಾಕಿ ಮಹಾನಾಯಕರಂತೆ ಮೆರೆದು ಸುದ್ದಿವಾಹಿನಿಗಳ ಮೂಲಕ ಅಪಹಾಸ್ಯಕ್ಕೆ ಈಡಾಗುತ್ತಿದ್ದಾರೆ. ಇಂತಹವರನ್ನು ಬಹಿರಂಗವಾಗಿ ಸಂಘಟನೆಗಳಿಂದ ಹೊರಗೆ ಕಳಿಸಲು ರೈತರು ಸಿದ್ಧವಾಗಬೇಕು ಎಂದರು. 15 ದಿನದಲ್ಲಿ ಕಬ್ಬಿನ ದರ ನಿಗದಿ ಆಗದಿದ್ದರೆ ವಿಧಾನಸೌಧ ಮುತ್ತಿಗೆಗೆ ರಾಜ್ಯದ 20 ಲಕ್ಷ ಕಬ್ಬು ಬೆಳೆಗಾರರು ಸಿದ್ಧರಾಗಬೇಕು ಎಂದು ಎಚ್ಚರಿಸಿದರು ಆಕಸ್ಮಿಕ ಬೆಂಕಿ ಅಪಘಾತ ಕಬ್ಬುಸುಟ್ಟಾಗ ಕಾರ್ಖಾನೆಗಳು ಕಟಾವ್ ಮಾಡಿಸಿಕೊಂಡು ಕಾರ್ಖಾನೆ ಅರೆದು ಇ ಹಣದಲ್ಲಿ ಶೇಕಡ 25ರಷ್ಟು ಕಬ್ಬಿನ ದರದಲ್ಲಿ ಕಡಿತ ಮಾಡಿಕೊಳ್ಳುತ್ತಿದ್ದಾರೆ. ಇದು ಅವೈಜ್ಞಾನಿಕ ನೀತಿಯಾಗಿದೆ ಇದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು. ಕಬ್ಬಿನ ಬೆಳೆಗೆ ಬೆಳೆ ವಿಮೆ ಯೋಜನೆ ಫಸಲ್ ಭೀಮಾ ಯೋಜನೆಯನ್ನು ಜಾರಿಗೆ ತರಬೇಕು ಕೇಂದ್ರ ಸರ್ಕಾರ ಗ್ಯಾಂಬ್ಲಿಂಗ್ ಆಡುವ ರೇಸ್ ಕೋರ್ಸ್, ಕುದುರೆ ಬೆಟ್ಟಿಂಗ್, ಕ್ಯಾಸಿನೋ ಗಳಿಗೆ ಜಿಎಸ್ಟಿ ವಿಧಿಸಿಲ್ಲ ಆದರೆ ಬಡರೈತ ಉತ್ಪಾದಿಸುವ ಮಜ್ಜಿಗೆ ಮೊಸರು ಅಪ್ಪಳ ಕೊಳವೆ ಬಾವಿ ಹಾಲು ಕರೆಯುವ ಯಂತ್ರಗಳ ಮೇಲೆ ಜಿಎಸ್ಟಿ ವಿದೇಶಿ ರೈತರಿಗೆ ಬರೆ ಎಳೆದಿದ್ದಾರೆ ಇದನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆ ಧರಣಿಯಲ್ಲಿ ಹತ್ತಳ್ಳಿ ದೇವರಾಜ್, ರಾಜ್ಯ ಸಂಘಟನಾ ಕಾರ್ಯದರ್ಶಿ ಪಿ ಸೋಮಶೇಖರ್, ಕೆರೆಹುಂಡಿ ರಾಜಣ್ಣ, ಕಿರಗಸುರ್ ಶಂಕರ ಕೂಡನಹಳ್ಳಿ ರಾಜಣ್ಣ , ತಾಲ್ಲೂಕು ಅಧ್ಯಕ್ಷರುಗಳಾದ ಕುರುಬೂರು ಸಿದ್ದೇಶ್ ಆಡರವಿ, ಲಕ್ಷ್ಮಿಪುರ ವೆಂಕಟೇಶ್ , ಬಿದರಳ್ಳಿ ಮಾದಪ್ಪ, ಬರಡನಪುರ ನಾಗರಾಜ್ ದೇವಮಣಿ, ವರಕೋಡು ನಾಗೇಶ್, ಅಂಬಳೆ ಮಂಜುನಾಥ್, ಮಾದಪ್ಪ ತರಕಾರಿ ಲಿಂಗರಾಜ್, ಪಿ ರಾಜು, ಮಹದೇವ್,ರೇವಣ್ಣ, ವಿಜಯೇಂದ್ರ, ಇನ್ನು ಮುಂತಾದ ನೂರಾರು ರೈತರು ಇದ್ದರು. : -- -- – – .