ನಾಳೆ ಆಷಾಢ ಶುಕ್ರವಾರ: ಪೂರ್ವ ಸಿದ್ಧತೆಯ ಕಾರ್ಯಗಳ ಪರಿಶೀಲಿಸಿದ ಶಾಸಕ ಎಸ್.ಎ ರಾಮದಾಸ್. ಮೈಸೂರು,ಜೂನ್,30,2022(..):ಆಷಾಢ ಮಾಸದ ಆಷಾಢ ಶುಕ್ರವಾರ ಹಾಗೂ ತಾಯಿ ವರ್ಧಂತಿಯ ದಿನ ಸಾವಿರಾರು ಭಕ್ತಾಧಿಗಳು ಆಗಮಿಸುವ ಹಿನ್ನಲೆಯಲ್ಲಿ ಪೂರ್ವ ಸಿದ್ಧತೆಯ ಕಾರ್ಯಗಳ ಬಗ್ಗೆ ಶಾಸಕ ಎಸ್.ಎ.ರಾಮದಾಸ್ ಪ್ರಗತಿ ಪರಿಶೀಲಿಸಿದರು. ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್, ಜುಲೈ ತಿಂಗಳಾಧ್ಯಂತ ದಿನಾಂಕ 1 ರಿಂದ ಜುಲೈ 28 ರ ತನಕ ಆಷಾಢ ಮಾಸದಲ್ಲಿ ಬರುವ ಶುಕ್ರವಾರ ಮತ್ತು ತಾಯಿ ವರ್ಧಂತಿಯ ದಿನಗಳಲ್ಲಿ ಸಾವಿರಾರು ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೈಗೊಳ್ಳಬೇಕಾದ ಕಾರ್ಯಗಳ ವೀಕ್ಷಣೆ ಮತ್ತು ಪ್ರಗತಿ ಪರಿಶೀಲನೆ ನಡೆಸಲಾಯಿತು. ಪೊಲೀಸ್ ಇಲಾಖೆ, ಸಂಚಾರಿ ಪೊಲೀಸ್ ಇಲಾಖೆ, ನಗರಪಾಲಿಕೆ, ಯುಜಿಡಿ, ವಾಣಿವಿಲಾಸ ನೀರು ಸರಬರಾಜು, ಅಭಿವೃದ್ಧಿ ಪ್ರಾಧಿಕಾರ, ಆರೋಗ್ಯ ಇಲಾಖೆ ಹೀಗೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಲಾಯಿತು. ಎಲ್ಲಾ ಕಡೆ ಸಿಸಿಟಿವಿ ಅಳವಡಿಕೆ ಹಾಗೂ ಬರುವ ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದೆ ನೇರವಾಗಿ ದರ್ಶನ ಮಾಡಲು ಅನುಕೂಲಕರವಾಗುವಂತೆ ಹಾಗೂ ಎಲ್ ಇಡಿ ಪರದೆ ಮೂಲಕ ದರ್ಶನಕ್ಕೆ ಅವಕಾಶ ಕಲ್ಪಿಸಿ ಕೊಡುವುದು, ವಿವಿಧ ಕಾರ್ಯದ ಪರಿಶೀಲನೆ ಮಾಡಲಾಯಿತು. ಭಕ್ತಾದಿಗಳು ಬಂದಲ್ಲಿ ಮೂರು ವಿಧವಾದ ಸರತಿ ಸಾಲು ಮಾಡಲಾಗಿದ್ದು ಉಚಿತವಾಗಿ ದರ್ಶನ ಪಡೆಯಲು, ರೂಪಾಯಿ 50ರ ಟಿಕೆಟ್ ಮೂಲಕ ದರ್ಶನ ಪಡೆಯಲು, ಹಾಗೂ 300 ಟಿಕೆಟ್ ನಲ್ಲಿ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಕ್ಯೂನಲ್ಲಿ ನಿಂತು ಬರುವ ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆಯನ್ನು ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಸರತಿ ಸಾಲಿನ ಸ್ಥಳದಲ್ಲಿಯೇ ಇ-ಟಾಯ್ಲೆಟ್ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ದೇವರ ದರ್ಶನ ಪಡೆದ ಭಕ್ತಾದಿಗಳಿಗೆ ಪ್ರತಿಯೊಬ್ಬರಿಗೂ ಕುಂಕುಮ ಹಾಗೂ ಪ್ರಸಾದ ನೀಡಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ದರ್ಶನ ಪಡೆದು ಹೊರ ಬರುವ ಭಕ್ತಾದಿಗಳಿಗೆ ಎರಡು ರೀತಿಯ ಪ್ರಸಾದ ವಿತರಣೆ ಮಾಡಲು ನಿರ್ಧರಿಸಿದ್ದು ಒಂದು ದೊನ್ನೆಯ ಮೂಲಕ ಪ್ರಸಾದ ನೀಡುವಂತದ್ದು ಮತ್ತೊಂದು ಕುಳಿತು ಬಾಳೆ ಎಲೆಯಲ್ಲಿ ಪ್ರಸಾದ ಸ್ವೀಕರಿಸುವ ಒಂದೇ ಸಮಯದಲ್ಲಿ 1000 ಜನಕ್ಕೆ ಬಾಳೆಲೆಯಲ್ಲಿ ಊಟ ಪ್ರಸಾದ ನೀಡುವಂತಹ ಕಾರ್ಯಕ್ಕೆ ಸಜ್ಜಾಗಿದೆ. ಪ್ರಸಾದ ಸೇವಿಸಿ ನಂತರ ಬಾಳೆ ಎಲೆ, ನೀರು ಲೋಟ, ಇತರೆ ತ್ಯಾಜ್ಯಗಳನ್ನು ನಗರಪಾಲಿಕೆ ಆರೋಗ್ಯ ಅಧಿಕಾರಿಗಳು ಟ್ರ್ಯಾಕ್ಟರ್ ಮೂಲಕ ವಿಲೇವಾರಿ ಮಾಡಲು ಸೂಕ್ತ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಸಾರ್ವಜನಿಕರಿಗೆ ಭಕ್ತಾದಿಗಳಿಗೆ ತಮ್ಮ ಖಾಸಗಿ ವಾಹನಗಳನ್ನು ಮೂಲಕ ಚಾಮುಂಡಿಬೆಟ್ಟಕ್ಕೆ ತೆರಳಲು ಅವಕಾಶ ಇಲ್ಲದ ಕಾರಣ ಉಚಿತವಾಗಿ ಬಸ್ ವ್ಯವಸ್ಥೆಯನ್ನು ತಿ.ನರಸೀಪುರ ರಸ್ತೆ ಹಾಗೂ ಎಂ.ಜಿ.ರಸ್ತೆಯ ಜಂಕ್ಷನ್ ನಲ್ಲಿ ಇರುವ ಮೈದಾನ ಲಲಿತ ಮಹಲ್ ಹೋಟೆಲ್ ನ ಪಕ್ಕದಲ್ಲಿರುವ ಮೈದಾನದಲ್ಲಿ ಕಲ್ಪಿಸಲಾಗಿರುತ್ತದೆ. ಹಾಗೂ ಭಕ್ತಾದಿಗಳಿಗೆ ಹಾಗೂ ಎರಡು ಡೋಸ್ ಲಸಿಕೆ ಕಡ್ಡಾಯವಾಗಿದ್ದು ಇಲ್ಲದಿದ್ದಲ್ಲಿ ಕೋವಿಡ್ ಪರೀಕ್ಷೆಯ ನೆಗಿಟಿವ್ ಸರ್ಟಿಫಿಕೇಟ್ ಕಡ್ಡಾಯವಾಗಿರುತ್ತದೆ ಎಂದು ಶಾಸಕ ರಾಮದಾಸ್ ತಿಳಿಸಿದರು. : -- - – -