ಬೆಂಗಳೂರಿನಲ್ಲಿ ಭಾರಿ ಮಳೆಗೆ ಇಬ್ಬರು ಕಾರ್ಮಿಕರು ಬಲಿ. ಬೆಂಗಳೂರು,ಮೇ,18,2022(..):ಬೆಂಗಳೂರಿನಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ ಇಬ್ಬರು ಕಾರ್ಮಿಕರು ಬಲಿಯಾಗಿದ್ದಾರೆ. ಪೈಪ್ ಲೈನ್ ಗೆ ಸಿಲುಕಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಉಲ್ಲಾಳ ಉಪನಗರದ ಉಪಕಾರ್ ಲೇಔಟ್‌ನಲ್ಲಿ ಪೈಪ್‌ ಲೈನ್ ಕಾಮಗಾರಿ ವೇಳೆ ಈ ಅವಘಡ ಸಂಭವಿಸಿದೆ. ಬಿಹಾರ ಮೂಲದ ದೇವ್ ಭರತ್ ಹಾಗೂ ಉತ್ತರ ಪ್ರದೇಶದ ಅಂಕಿತ್ ಕುಮಾರ್ ಮೃತಪಟ್ಟ ಕಾರ್ಮಿಕರು. ಪೈಪ್‌ ಲೈನ್ ಕಾಮಗಾರಿ ಸ್ಥಳದಲ್ಲಿ ಮಳೆ ನೀರು ತುಂಬಿಕೊಂಡು ಇಬ್ಬರು ಕಾರ್ಮಿಕರು ಉಸಿರು ಕಟ್ಟಿ ಮೃತಪಟ್ಟಿದ್ದಾರೆ. ಈ ವೇಳೆ ಅದೃಷ್ಟವಶಾತ್ ಒಬ್ಬರು ಅಲ್ಲಿಂದ ಪಾರಾಗಿದ್ದಾರೆ. ಉಲ್ಲಾಳ ಉಪನಗರದ ಉಪಕಾರ್ ಲೇಔಟ್ ಬಳಿ ಕಾವೇರಿ ನೀರಿನ 5 ಹಂತದ ಪೈಪ್ ಲೈನ್ ಕಾಮಗಾರಿಯಲ್ಲಿ ಮೂವರು ಕಾರ್ಮಿಕರು ತೊಡಗಿದ್ದರು. ಇನ್ನು ಇಬ್ಬರು ಕಾರ್ಮಿಕರ ಸಾವಿಗೆ ಸಂಬಂಧಿಸಿದಂತೆ ಗುತ್ತಿಗೆದಾರರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. : - - - -