: ನಿರೀಕ್ಷಣ ಜಾಮೀನು ಅರ್ಜಿ ವಜಾ. ಸಂಕಷ್ಟದಲ್ಲಿ ಬಿಜೆಪಿ ಮುಖಂಡ ಅಪ್ಪಣ್ಣ..! ಮೈಸೂರು, ಮೇ 10, 2022 : (.. ) : ಉದ್ಯಮಿ ಶರತ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪ್ರಕರಣದ ಮೊಲದ ಆರೋಪಿ ಪ್ರವೀಣ್ ಸಲ್ಲಿಸಿದ್ದ ನಿರೀಕ್ಷಣ ಜಾಮೀನು ಅರ್ಜಿ ವಜಾ. ನಗರದ ನಾಲ್ಕನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ದೇವರಾಜ್ ಅವರು, ಪ್ರಕರಣದ ಮೊದಲ ಆರೋಪಿ ಪ್ರವೀಣ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದರು. ಈ ಹಿನ್ನೆಲೆಯಲ್ಲಿ ಇದೀಗ ಪ್ರಕರಣದ ಎರಡನೇ ಆರೋಪಿಯಾಗಿರುವ ಬಿಜೆಪಿ ಮುಖಂಡ ಅಪ್ಪಣ್ಣಗೆ ಸಂಕಷ್ಟ ಎದುರಾಗಿದೆ. ಘಟನೆ ಹಿನ್ನೆಲೆ : ಬಿಜೆಪಿ ಮುಖಂಡ ಅಪ್ಪಣ್ಣ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಡೆತ್‌ನೋಟ್‌ನಲ್ಲಿ ಅಣ್ಣಪ್ಪನ ಹೆಸರು ಬರೆದು ಮೈಸೂರಿನ ಗಣೇಶ ನಗರದ ನಿವಾಸಿ, ಉದ್ಯಮಿ ಶರತ್‌ ಏಪ್ರಿಲ್ 18 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು. ಘಟನೆಗೆ ಸಂಬಂಧಿಸಿದಂತೆ ಮೈಸೂರಿನ ಎನ್.ಆರ್ ಪೊಲೀಸ್ ಠಾಣೆಯಲ್ಲಿ ಅಪ್ಪಣ್ಣ ಹಾಗೂ ಪ್ರವೀಣ್ ಎಂಬುವರ ಮೇಲೆ ಎಫ್‌ಐಆರ್ ದಾಖಲಾಗಿದೆ. ಜಂಗಲ್‌ ಲಾಡ್ಜಸ್‌ ಮತ್ತು ರೆಸಾರ್ಟ್‌ನ ಅಧ್ಯಕ್ಷರಾಗಿರುವ ಅಪ್ಪಣ್ಣ, ಉದ್ಯಮಿ ಶರತ್‌ ಅವರಿಂದ 8 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಆದರೆ ಸಾಲವನ್ನು ವಾಪಸ್‌ ಕೊಟ್ಟಿರಲಿಲ್ಲ. ಪ್ರವೀಣ್‌ ಎಂಬಾತ ಕೂಡ ಇವರಿಗೆ ಪಾಲುದಾರಿಕೆಯಲ್ಲಿ ವಂಚನೆ ಮಾಡಿದ್ದ. ಒಂದೆಡೆ ಪಾಲುದಾರಿಕೆಯಲ್ಲಿ ವಂಚನೆ, ಮತ್ತೊಂದೆಡೆ ಸಾಲ ಪಡೆದ ಅಪ್ಪಣ್ಣನಿಂದಲೂ ವಂಚನೆ ಆರೋಪ ಕೇಳಿ ಬಂದಿತ್ತು . ಇದರಿಂದ ಬೇಸತ್ತು ಶರತ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪ್ರವೀಣ್ ನಡೆಸುತ್ತಿದ್ದ ಸ್ವದೇಶಿ ಎಂಬ ಸೋಲಾರ್ ಮತ್ತು ಯುಪಿಎಸ್ ಹಾಗೂ ಮನೆಯ ಇಂಟಿರಿಯರ್ಸ್ ಕಂಪನಿಯಲ್ಲಿ ಶರತ್‌ ಪಾಲುದಾರನಾಗಿದ್ದ. ಪ್ರವೀಣ್‌ ಶೇಕಡಾ 50% ರಷ್ಟು ಪಾಲುದಾರಿಕೆ ಮಾಡಿಕೊಂಡಿದ್ದ. ನಂತರ ಉದ್ಯಮದಲ್ಲಿ ಪಾರ್ಟನ್‌ಶಿಪ್‌ನಿಂದ ಶರತ್‌ನನ್ನ ತೆಗೆದು ಹಾಕಿ, 50 % ಹಣ ವಾಪಸ್ ನೀಡದೇ ವಂಚಿಸಿದ್ದ. ಇದರಿಂದ ನೊಂದಿದ್ದ ಶರತ್‌ ಆಗಾಗ ಪತ್ನಿ ಕೃಪಾಲಿನಿ ಬಳಿ ನೋವನ್ನ ಹೇಳಿಕೊಳ್ಳುತ್ತಿದ್ದರು. ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್‌ನಲ್ಲಿ ಪ್ರವೀಣ್ ಹಾಗೂ ಅಪ್ಪಣ್ಣ ಹೆಸರನ್ನು ಅವರು ಉಲ್ಲೇಖಿಸಿದ್ದು, ಇವರಿಬ್ಬರ ಮೇಲೂ ಕಾನೂನು ಕ್ರಮ ಜರುಗಿಸುವಂತೆ ಡೆತ್‌ನೋಟ್‌ನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಎನ್.ಆರ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಶರತ್ ಪತ್ನಿ ಕೃಪಾಲಿನಿ ದೂರು ದಾಖಲಿಸಿದ್ದಾರೆ. : ---------