ಸಿಎಂ ಬೊಮ್ಮಾಯಿ ಭೇಟಿ ಮಾಡಿ ಅಜಾನ್ ಗೆ ಸೂಕ್ತ ನಿಯಮ ರೂಪಿಸುವಂತೆ ಮನವಿ ಮಾಡಿದ ಅಲ್ಪಸಂಖ್ಯಾತರ ನಿಯೋಗ. ಬೆಂಗಳೂರು,ಮೇ,9,2022(..):ರಾಜ್ಯದಲ್ಲಿ ಆಜಾನ್ ವಿರುದ್ಧ ಶ್ರೀರಾಮ ಸೇನೆ ಸೇರಿ ಕೆಲ ಹಿಂದೂ ಪರ ಸಂಘಟನೆ ಗಳು ಹೋರಾಟಕ್ಕಿಳಿದಿದ್ದು, ಮಸೀದಿಗಳಲ್ಲಿ ಮೈಕ್ ತೆರವುಗೊಳಿಸುವಂತೆ ಆಗ್ರಹಿಸಿವೆ. ಈ ಬೆನ್ನೆಲೆ ಇದೀಗ ಕಾಂಗ್ರೆಸ್ ಶಾಸಕ ಯುಟಿ ಖಾದರ್ ನೇತೃತ್ವದಲ್ಲಿ ಅಲ್ಪ ಸಂಖ್ಯಾತರ ನಿಯೋಗ ಸೋಮವಾರ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾದ ಕಾಂಗ್ರೆಸ್ ಅಲ್ಪಸಂಖ್ಯಾತರ ನಿಯೋಗ, ಅಜಾನ್ ಗೆ ಸೂಕ್ತ ನೀತಿ ರೂಪಿಸಬೇಕು. ಅಲ್ಪ ಸಂಖ್ಯಾತರನ್ನ ಟಾರ್ಗೆಟ್ ಮಾಡದಂತೆ ಸಿಎಂಗೆ ಮನವಿ ಮಾಡಿತು. ಸಿಎಂ ಭೇಟಿ ನಂತರ ಮಾತನಾಡಿದ ಶಾಸಕ ಯು.ಟಿ. ಖಾದರ್, ರಾಜ್ಯದಲ್ಲಿ ಬಹುತೇಕ ಎಲ್ಲ ಜನರು ಶಾಂತಿ ಸೌಹಾರ್ದತೆ ನಿರೀಕ್ಷೆ ಮಾಡುತ್ತಿದ್ದಾರೆ. ಕೆಲವೊಂದು ಶಕ್ತಿ ಗಳು ಕೆಲ ವಿಷಯ ಮುಂದಿಟ್ಟುಕೊಂಡು ಅಶಾಂತಿ ಉಂಟು ಮಾಡಲು ಯತ್ನ ಮಾಡುತ್ತಿದ್ದಾರೆ. ಸರ್ಕಾರ ಶಾಂತಿಯುತ ವಾತಾವರಣ ನಿರ್ಮಾಣ ಮಾಡಬೇಕು. ಈ ನಿಟ್ಟಿನಲ್ಲಿ ಸಿಎಂ ಜತೆ ಚರ್ಚೆ ಮಾಡಿದ್ದೇವೆ ಎಂದಿದ್ದಾರೆ. ಹಾಗೆಯೇ ಸಿಎಂ ಕೂಡ ಎಲ್ಲ ರೀತಿಯ ಕ್ರಮ ಕೈಗೊಳ್ಳುವ ಭರವಸೆ ಕೊಟ್ಟಿದ್ದಾರೆ. ಆಜಾನ್ ಬಗ್ಗೆ ಗೃಹ ಸಚಿವರು ಎಲ್ಲಿಯೂ ಹೇಳಿಲ್ಲ. ಆದರೆ ಶಬ್ದ ಮಾಲಿನ್ಯದ ಬಗ್ಗೆ ಕೋರ್ಟ್ ಆದೇಶದಂತೆ ಸರ್ಕಾರದ ನಿಯಮ ರೂಪಿಸಲಿದೆ. ಅದರಂತೆ ಎಲ್ಲರು ಕೂಡ ಪಾಲನೆ ಮಾಡಬೇಕು ಎಂದಿದ್ದಾರೆ ಎಂದು ಯುಟಿ ಖಾದರ್ ತಿಳಿಸಿದರು. : – – - -