ಮೈಸೂರಿಗೆ ಗೂಡ್ಸ್ ಆಟೋದಲ್ಲಿ ಬಂದ ಆರ್. ಅಶೋಕ್, ಅಶ್ವತ್ ನಾರಾಯಣ್ ಮೈಸೂರು,ಜುಲೈ,12,2024 (..):ಮುಡಾ ಹಗರಣವನ್ನ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಇಂದು ಮೈಸೂರಿನಲ್ಲಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿತ್ತು. ಆದರೆ ಪ್ರತಿಭಟನೆಗೂ ಮುನ್ನವೇ ಸರ್ಕಾರ ತಡೆಯೊಡ್ಡಿದ್ದು ವಶಕ್ಕೆ ಪಡೆಯುವ ಭೀತಿಯಿಂದಾಗಿ ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಶಾಸಕ ಅಶ್ವಥ್ ನಾರಾಯಣ್ ಗೂಡ್ಸ್ ಆಟೋದಲ್ಲಿ ಮೈಸೂರಿಗೆ ಆಗಮಿಸಿದರು. ಮೈಸೂರಿನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬರುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಹಲವು ಕಾರ್ಯಕರ್ತರನ್ನ ಬೆಂಗಳೂರಿನ ಕುಂಬಳಗೂಡಿನಲ್ಲಿ ವಶಕ್ಕೆ ಪಡೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಆರ್. ಅಶೋಕ್, ಅಶ್ವತ್ ನಾರಾಯಣ್ ಅವರು ಗೂಡ್ಸ್ ಆಟೋ ಹತ್ತಿ ಮೈಸೂರಿಗೆ ಆಗಮಿಸಿದರು. ಈ ಕುರಿತು ಮಾತನಾಡಿದ ಆರ್.ಅಶೋಕ್, ಗೂಡ್ಸ್ ವಾಹನದಲ್ಲಿ ಬೆಂಗಳೂರಿಂದ ಮೈಸೂರಿಗೆ ಬಂದಿದ್ದೇನೆ. ನಮ್ಮ ಪ್ರತಿಭಟನೆಯನ್ನ ಹತ್ತಿಕ್ಕುವ ಕೆಲಸವನ್ನ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಮುಡಾದಲ್ಲಿ ಎರೆಡು ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ. ಕೂಡಲೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಹಗರಣದ ತನಿಖೆಯನ್ನ ಸಿಬಿಐಗೆ ವಹಿಸಬೇಕು. ಮಾಜಿ ಸಚಿವ ನಾಗೇಂದ್ರ ಅವರನ್ನ ಇಡಿ ವಶಕ್ಕೆ ಪಡೆದಿದೆ. ಉಪ್ಪು ತಿಂದವನು ನೀರು ಕುಡಿಯಲೇ ಬೇಕು. ತಡವಾದರೂ ಸರಿ ನ್ಯಾಯ ಸಿಕ್ಕಿದೆ ಎಂದಿದ್ದಾರೆ. : , , . ,