ಈ ನೇಮಕ ನನ್ನ ಜವಾಬ್ದಾರಿ ಹೆಚ್ಚಿಸಿದೆ : ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಬೆಂಗಳೂರು, ಜು.11,2024: (..) ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ನೇಮಕಗೊಂಡಿರುವುದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಇದನ್ನು ಉಳಿಸಿಕೊಂಡು ಮುನ್ನಡೆಯುವೆ ಎಂದು ಆಯೇಷಾ ಖಾನಂ ಭರವಸೆ ನೀಡಿದರು. ಮಾಧ್ಯಮ ಅಕಾಡೆಮಿಯಲ್ಲಿ ನಡೆದ ಸರಳ ಮತ್ತು ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು ಹೇಳಿದಿಷ್ಟು, ಅನೇಕ ಹಿರಿಯ ಪತ್ರಕರ್ತರು ಈ ಹುದ್ದೆಯನ್ನು ಅಲಂಕರಿಸಿದ್ದು ನಾನು ವಿದ್ಯಾರ್ಥಿ ದೆಸೆಯಲ್ಲಿದ್ದಾಗ ಇಲ್ಲಿಗೆ ಭೇಟಿ ನೀಡಿದ್ದೆ. ಇದೊಂದು ದೇಗುಲವಿದ್ದಂತೆ. ಇದರ ಘನತೆ ಗೌರವಕ್ಕೆ ಚ್ಯುತಿ ಬರದಂತೆ ಕರ್ತವ್ಯ ನಿರ್ವಹಿಸುವೆ ಎಂದರು. ವೃತ್ತಿಯ ವಿವಿಧ ಕಾರಣಗಳಿಗೆ ಪತ್ರಕರ್ತರಲ್ಲಿ ಒಗ್ಗಟ್ಟು ಮೂಡಿಸುವ ಅವಶ್ಯಕತೆ ಇದೆ. ಪತ್ರಿಕೋದ್ಯಮ ಕ್ಷೇತ್ರದಲ್ಲೂ ಹಲವಾರು ಬದಲಾವಣೆಗಳಾಗುತ್ತಿವೆ. ಈ ನಿಟ್ಟಿನಲ್ಲಿ ಯುವ ಪತ್ರಕರ್ತರಿಗೆ ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಮಾಧ್ಯಮ ಅಕಾಡೆಮಿ ಮುಂದಡಿ ಇಡಲಿದೆ ಎಂದರು. ಧನ್ಯವಾದ: ಮಾಧ್ಯಮ ಅಕಾಡೆಮಿ ನೂತನ ಅಧ್ಯಕ್ಷೆಯಾಗಿ ನೇಮಕಗೊಂಡ ಹಿರಿಯ ಪತ್ರಕರ್ತೆ ಆಯೆಷಾ ಖಾನುಂ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರನ್ನು ಭೇಟಿಯಾಗಿ ಧನ್ಯವಾದ ಅರ್ಪಿಸಿದರು.‌ ಅಕಾಡೆಮಿ ಸದಸ್ಯರಾದ ಛಾಯಾಗ್ರಾಹಕ ವೆಂಕಟೇಶ್ ಮತ್ತು ಚಿತ್ರದುರ್ಗದ ಪತ್ರಕರ್ತ ಅಹೋಬಳಪತಿ ಜೊತೆಗಿದ್ದು ಧನ್ಯವಾದ ಅರ್ಪಿಸಿದರು. ಕೆ.ವಿ.ಪ್ರಭಾಕರ್ ಅವರು ಇಡೀ ತಂಡಕ್ಕೆ ಶುಭ ಹಾರೈಸಿದರು. : , , , , : “ . . , , ’