ಬೆದರಿಕೆ ಹಿನ್ನೆಲೆ ನ್ಯಾಯಾಧೀಶರಿಗೆ ವೈ ಶ್ರೇಣಿಯ ಭದ್ರತೆ: ಸಿಎಂ ಬಸವರಾಜ ಬೊಮ್ಮಾಯಿ. ಬೆಂಗಳೂರು,ಮಾರ್ಚ್,20,2022(..):ಹಿಜಾಬ್​ ವಿವಾದಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ ನ್ಯಾಯಾಧೀಶರಿಗೆ ಬೆದರಿಕೆ ಹಿನ್ನೆಲೆಯಲ್ಲಿ ವೈ ಕ್ಯಾಟಗರಿ ಭದ್ರತೆ ನೀಡಲು ಸೂಚನೆ ನೀಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ದೇಶ ದ್ರೋಹದ ಶಕ್ತಿಗಳು ನ್ಯಾಯಾಧೀಶರಿಗೆ ಬೆದರಿಕೆ ಹಾಕುವಂತಹ ವ್ಯವಸ್ಥಿತ ಕೆಲಸ ಮಾಡುತ್ತಿವೆ. ತಮಿಳುನಾಡಿನಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರ ಮೇಲೆ ಬೆದರಿಕೆ ಹಾಕಲಾಗಿದೆ. ನ್ಯಾಯಾಲಯದ ತೀರ್ಪನ್ನು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸುವ ಅವಕಾಶ ಇದೆ. ಆದರೂ ಜಡ್ಜ್ ಗಳಿಗೆ ಬೆದರಿಕೆ ಹಾಕಿರುವುದು ಖಂಡನೀಯ. ನಾನು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ನಾನು ನಮ್ಮ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಆರೋಪಿಗಳನ್ನ ನಮ್ಮ ರಾಜ್ಯದ ವಶಕ್ಕೆ ತೆಗೆದುಕೊಳ್ಳಬೇಕು. ಕಠಿಣವಾದ ಸೆಕ್ಷನ್​​ಗಳನ್ನು ಹಾಕಿ ಕೇಸ್ ನಡೆಸಲು ತಿಳಿಸಿದ್ದೇನೆ ಎಂದರು. ನ್ಯಾಯಾಧೀಶರಿಗೆ ಬೆದರಿಕೆ ಹಾಕಿ ಮೂರು ದಿನ ಕಳೆದಿದೆ. ಆದರೆ ಜಾತ್ಯಾತೀತವಾದಿಗಳು ಮೌನವಾಗಿದ್ದಾರೆ. ಒಂದು ವರ್ಗದ ಜನಕ್ಕೆ ಇಷ್ಟು ಓಲೈಕೆ ಮಾಡುವುದು ಸರಿಯಲ್ಲ. ಈಗಲಾದರೂ ಹೊರಗೆ ಬಂದು ಈ ಘಟನೆಯನ್ನು ಖಂಡಿಸಲಿ ಎಂದು ಪರೋಕ್ಷವಾಗಿ ಕಾಂಗ್ರೆಸ್ ಇಬ್ಬಗೆಯ ನೀತಿಗೆ ಸಿಎಂ ಬಸವರಾಜ ಬೊಮ್ಮಾಯಿ ಟಾಂಗ್ ನೀಡಿದರು. : –- -