ಸಕ್ಕರೆನಾಡು ಮಂಡ್ಯದಲ್ಲಿದೆ ಗುಬ್ಬಚ್ಚಿ ಪ್ರೇಮಿ ಕುಟುಂಬ.. ಮಂಡ್ಯ,ಮಾರ್ಚ್,20,2022(..):ಹೆಚ್ಚುತ್ತಿರುವ ಶಬ್ದ ಮಾಲಿನ್ಯದಿಂದಾಗಿ ಕಡಿಮೆಯಾಗುತ್ತಿರುವ ಗುಬ್ಬಚ್ಚಿಗಳನ್ನ ರಕ್ಷಿಸಲು ಮತ್ತು ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್ 20 ರಂದು ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಲಾಗುತ್ತದೆ. ಈ ನಡುವೆ ಸಕ್ಕರೆ ನಾಡು ಮಂಡ್ಯದಲ್ಲಿ ಗುಬ್ಬಿಗಳ ಸಂತತಿ ಉಳಿವಿಗಾಗಿ ಕುಟುಂಬವೊಂದು ಟೊಂಕ ಕಟ್ಟಿ ನಿಂತಿದೆ. ಹೌದು, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗಂಜಾಮ್ ನ ಜಯರಾಂ ರಾವ್ ಕುಟುಂಬದವರು ಗುಬ್ಬಿಗಳ ಸಂರಕ್ಷಣೆ ಮಾಡುತ್ತಿದ್ದು, ಗುಬ್ಬಿಗಳಿಗಾಗಿಯೇ ಮನೆಯಲ್ಲಿ ಪೈಪ್ ನಿಂದ ನೂರಾರು ಗೂಡುಗಳನ್ನ ನಿರ್ಮಾಣ ಮಾಡಿದ್ದಾರೆ. ಗುಬ್ಬಿಗಳ ಚಿನ್ನಾಟಕ್ಕೆ ಮನೆಯಲ್ಲಿ ಚಿಕ್ಕ ಜಲಪಾತ ನಿರ್ಮಾಣ ಮಾಡಿ ಆಹಾರ ನೀರು ನೀಡಿ ಪೋಷಣೆ ಮಾಡುವ ಮೂಲಕ ಗುಬ್ಬಿಗಳ ವಾಸಕ್ಕೆ ಮನೆಯಲ್ಲಿ ಪೂರಕ ವಾತಾವರಣ ಸೃಷ್ಟಿಮಾಡಿದ್ದಾರೆ. ಇವರ ಮನೆಯ ಪೂರಕ ವಾತವರಣದಿಂದ ಇಂದು ಇವರ ಮನೆಯಂಗಳದಲ್ಲಿ ನೂರಾರು ಗುಬ್ಬಿಗಳ ವಾಸ ಮಾಡುತ್ತಿವೆ. ಜಯರಾಂ ರಾವ್ ಅವರ ಕುಟುಂಬ ಪ್ರತಿದಿನ ಗುಬ್ಬಿಗಳ ಕಲರವ ಕೇಳಿ ಸಂತಸ ಪಟ್ಟು ಗುಬ್ಬಿಗಳ ಪೋಷಣೆ ಮಾಡುತ್ತಿದ್ದು, ಪ್ರತಿ ವರ್ಷ ಮನೆಯಲ್ಲಿ ಗುಬ್ಬಿ ದಿನಾಚರಣೆಯನ್ನು ಮಕ್ಕಳು ಮತ್ತು ನೆರೆಹೊರೆಯವರೊಂದಿಗೆ ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದಾರೆ. ಈ ಕುಟುಂಬದ ಗುಬ್ಬಿಗಳ ಮೇಲಿನ ಪ್ರೀತಿ ಸಂರಕ್ಷಣೆ ಬಗ್ಗೆ ತೋರುತ್ತಿರುವ ಕಾಳಜಿ ನಿಜಕ್ಕೂ ಎಲ್ಲರೂ ಮೆಚ್ಚುವಂತಹದ್ದು. : - –-