ಕನ್ನಡಿಗರೇ ನೆರವಾಗಿ… ಕನ್ನಡ ಬಾವುಟ ರೂಪಿಸಿದ ದಿ.ಮ.ರಾಮಮೂರ್ತಿ ಪತ್ನಿಗೆ ಬೇಕಿದೆ ನೆರವು ಬೆಂಗಳೂರು, ಮಾರ್ಚ್ 13, 2022 (..):ಕನ್ನಡ ಚಳವಳಿಗಾಗಿ ತನ್ನ ಗಂಡ ಮತ್ತು ಇಬ್ಬರು ಮಕ್ಕಳನ್ನು ಕಳೆದುಕೊಂಡು ಒಬ್ಬಂಟಿ ಜೀವನ ನಡೆಸುತ್ತಿರುವ ದಿ. ಮ.ರಾಮಮೂರ್ತಿ ಅವರ ಪತ್ನಿ ಕಮಲಮ್ಮ ರಾಮಮೂರ್ತಿ ಅವರಿಗೆ ನೆರವು ಬೇಕಿದೆ. ಕನ್ನಡ ಸೇನಾನಿ, ಕನ್ನಡ ಬಾವುಟದ ಸೃಷ್ಟಿಕರ್ತ ದಿ. ಮ. ರಾಮಮೂರ್ತಿ ಅವರ ಶ್ರೀಮತಿ ಕಮಲಮ್ಮ ರಾಮಮೂರ್ತಿ ಅವರು ಹಲವು ವರ್ಷಗಳಿಂದ ಬಸವನಗುಡಿಯ ಶಾರದಾ ಸೇವಾಶ್ರಮದಲ್ಲಿದ್ದಾರೆ. ಈ ನಡುವೆ ಕನ್ನಡ ಪರ ಹೋರಾಟಗಾರರು ಮಾರ್ಚ್ 11 ಮ.ರಾಮಮೂರ್ತಿ ಅವರ ಜನ್ಮ ದಿನದಂದು ಭೇಟಿಯಾಗಲು ಹೋಗಿದ್ದಾಗ ಕಮಲಮ್ಮ ಅವರು ಕೆಳಗೆ ಬಿದ್ದು ಬಲಗಾಲಿನ ಮೂಳೆ ಮುರಿದು ಕಿಮ್ಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಒಳಗಾಗಿರುವ ವಿಚಾರ ಗೊತ್ತಾಗಿದೆ. ಈ ವೇಳೆ ಕನ್ನಡದ ಗೆಳೆಯರೊಂದಿಗೆ ಭೇಟಿ ಮಾಡಿ ಅವರ ಯೋಗಕ್ಷೇಮವನ್ನು ವಿಚಾರಿಸಿ ಕೈಲಾದ ಸಹಾಯ ಮಾಡಲಾಗಿದೆ. ಶಸ್ತ್ರಚಿಕಿತ್ಸೆ ಆಗಿರುವುದರಿಂದ ಮುಂದಿನ ಫಿಜಿಯೋಥೆರಪಿ ಚಿಕಿತ್ಸೆಗೆ ಬಹಳ ಖರ್ಚು-ವೆಚ್ಚ ಇದೆ. ಸಹೃದಯ ಕನ್ನಡಿಗರು ಇದರ ಜವಾಬ್ದಾರಿ ಹೊರಬೇಕಾಗಿದೆ. ಹೀಗಾಗಿ ಸಹೃದಯರು ನೆರವು ನೀಡಬಹುದು. ಮ.ರಾಮಮೂರ್ತಿ ಅವರ ತಂಗಿಯ ಮಗ ಅಮರ್ ಅವರು ಕಮಲಮ್ಮ ಅವರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದಾರೆ. ಸಹೃದಯರು ನೆರವಾಗಲಿ ಮೊ: 9448118536 ಸಂಪರ್ಕಿಸಬಹುದು.