ಹಿಂದೂ ಧರ್ಮ ಉಳಿಯಬೇಕಾದರೇ ಮತಾಂತರ ನಿಷೇಧ ಕಾಯ್ದೆ ಜಾರಿಯಾಗಬೇಕು- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ಬೆಳಗಾವಿ,ಡಿಸೆಂಬರ್,23,2021(..):ಕಾಂಗ್ರೆಸ್ ನವರು ಕಾಟಾಚಾರಕ್ಕೆ ಮತಾಂತರ ನಿಷೇಧ ಕಾಯ್ದೆಯನ್ನ ವಿರೋಧಿಸುತ್ತಿದ್ದಾರೆ. ಹಿಂದೂ ಧರ್ಮ ಉಳಿಯಬೇಕಾದರೇ ಮತಾಂತರ ನಿಷೇಧ ಕಾಯ್ದೆ ಜಾರಿಯಾಗಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನುಡಿದರು. ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ದೇಶದಲ್ಲಿ ಮತಾಂತರ ಅವ್ಯಾಹತವಾಗಿ ನಡೆಯುತ್ತಿದೆ. ಹೀಗಾಗಿ ಅದನ್ನ ತಡೆಯಲು ಕಾಯ್ದೆ ಜಾರಿ ಮಾಡುತ್ತಿದ್ದೇವೆ. ಹಿಂದೂ ಧರ್ಮ ಉಳಿಯಬೇಕಾದರೇ ಇದೊಂದೇ ದಾರಿ. ಮತಾಂತರ ನಿಷೇಧ ಕಾಯ್ದೆ ಜಾರಿಯಾಗಲೇಬೇಕು. ವಿಧೇಯಕ ವಿಚಾರದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಇದ್ದೇವೆ. ಈ ವಿಧೇಯಕ ರಾಜ್ಯ ಸರ್ಕಾರಕ್ಕೆ ಪ್ರತಿಷ್ಠೆಯಾಗಿದೆ ಎಂದರು. ಪರಿಷತ್​ನಲ್ಲಿ ಬಹುಮತಕ್ಕೆ ತಂತ್ರಗಾರಿಕೆ ಮಾಡಿದ್ದೇವೆ. ಕಾಂಗ್ರೆಸ್ ನಾಯಕರಿಗೆ ದೇಶ ಹಾಳಾದ್ರೂ ಪರವಾಗಿಲ್ಲ. ಕಾಂಗ್ರೆಸ್‌ಗೆ ಬೇಕಾಗಿರುವುದು ವೋಟ್ ಬ್ಯಾಂಕ್ ಮಾತ್ರ. ಡಿಕೆಶಿ ವಿಧೇಯಕ ಪ್ರತಿ ಹರಿದುಹಾಕಿ ನಾಟಕ ಮಾಡಿದರು. ವಿಧೇಯಕ ವಿಚಾರದಲ್ಲಿ ಕಾಂಗ್ರೆಸ್‌ ನವರೇ ಬೆಂಬಲಿಸುತ್ತಾರೆ. ನಮಗೆ ಬೆನ್ನೆಲುಬಾಗಿ ಕಾಂಗ್ರೆಸ್ ಸದಸ್ಯರೇ ನಿಲ್ಲುತ್ತಾರೆ. ವಿಧಾನಸಭೆಯಲ್ಲಿ ಮತಾಂತರ ಬಿಲ್ ಪಾಸ್ ಮಾಡಲಿದ್ದೇವೆ’’ ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು. : –- – –--