ವಜಾಗೊಂಡಿದ್ಧ ಕೆಎಸ್ ಆರ್ ಟಿಸಿ ಸಿಬ್ಬಂದಿ 4 ವಾರದೊಳಗೆ ಮರುನೇಮಕ- ಸಾರಿಗೆ ಸಚಿವ ಶ್ರೀರಾಮುಲು. ಗದಗ,ಡಿಸೆಂಬರ್,21,2021(..):ವಜಾಗೊಂಡಿದ್ದ ಕೆಎಸ್‌ಆರ್​ಟಿಸಿ ಸಿಬ್ಬಂದಿಯನ್ನು 4 ವಾರದೊಳಗೆ ಮರುನೇಮಕ ಮಾಡಲಾಗುತ್ತದೆ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ. ಗದಗದಲ್ಲಿ ಇಂದು ಮಾತನಾಡಿದ ಸಾರಿಗೆ ಸಚಿವ ಶ್ರೀರಾಮುಲು, ಮುಷ್ಕರ ವೇಳೆ ಕೆಲವರು ಕೆಲಸಕ್ಕೆ ಗೈರಾಗಿದ್ದರು. ಅಂತವರನ್ನ ಕೆಲಸದಿಂದ ವಜಾ ಮಾಡಲಾಗಿತ್ತು. ವಜಾ ಆಗಿದ್ದವರನ್ನ ಇಲ್ಲಿಯವರೆಗೆ ಕೆಲಸಕ್ಕೆ ನೇಮಕಗೊಳಿಸಲು ಸಾಧ್ಯ ಆಗಿರಲಿಲ್ಲ. ನಾಲ್ಕು ವಿಭಾಗದ ಎಂಡಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು. ಮತಾಂತರ ನಿಷೇಧ ಕಾಯ್ದೆ ಕುರಿತು ಮಾತನಾಡಿದ ಶ್ರೀರಾಮುಲು, ಆಸೆ, ಆಮಿಷ, ಒತ್ತಡದ ಮೂಲಕ ಮತಾಂತರ ಆಗಬಾರದು. ಈ ರೀತಿ ಮತಾಂತರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮದುವೆ, ಶಿಕ್ಷಣ, ಹಣ, ಉಡುಗೊರೆ ಮೂಲಕ ಮತಾಂತರ ಮಾಡಿಸಿದರೆ ಅದು ಕಾನೂನು ಬಾಹಿರ. ಎಸ್‌ಸಿ, ಎಸ್‌ಟಿ ಸಮುದಾಯದ ಹಿತ ರಕ್ಷಣೆಗೆ ಸರ್ಕಾರ ಬದ್ಧ ಎಂದು ತಿಳಿಸಿದರು. ಎಮ್‌ ಇಎಸ್ ಪುಂಡಾಟಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು, ಎಂಇಎಸ್ ಅಂದ್ರೆ ಮಹಾ ಎಡವಟ್ಟು ಸಂಘ. ಪುಂಡಾಟಿಕೆ, ಹೇಡಿ ಕೃತ್ಯ, ನಾಟಕಕ್ಕೆ ಸರ್ಕಾರದಿಂದ ಪ್ರತ್ಯುತ್ತರ ಸಿಗುತ್ತದೆ. ಎಮ್​ಇಎಸ್ ನಿಷೇಧದ ಕುರಿತು ಸಿಎಂ ಪರಾಮರ್ಶೆ ಮಾಡುತ್ತಿದ್ದಾರೆ. ಇನ್ಮುಂದೆ ರಾಜ್ಯದಲ್ಲಿ ಎಂಇಎಸ್ ಆಟಗಳು ನಡೆಯೋದಿಲ್ಲ ಎಂದು ಹೇಳಿದರು. : - - – –- 4 - -.