ಸರ್ಕಾರಕ್ಕೆ ಸ್ವಾಭಿಮಾನವಿದ್ರೆ ಎಂಇಎಸ್ ನಿಷೇಧಿಸಲಿ- ಕರವೇ ಅಧ್ಯಕ್ಷ ನಾರಾಯಣಗೌಡ ಆಗ್ರಹ. ಬೆಂಗಳೂರು,ಡಿಸೆಂಬರ್,18,2021(..):ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿ ಪುಂಡಾಟ ಮೆರೆದ ಎಂಇಎಸ್ ವಿರುದ್ಧ ಕರವೇ ಅಧ್ಯಕ್ಷ ಟಿಎ ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ನಾರಾಯಣಗೌಡ, ಎಂಇಎಸ್ ಗೂಂಡಾಗಿರಿ ಮಾಡುತ್ತಿದೆ, ದೌರ್ಜನ್ಯ ಮಾಡುತ್ತಿದೆ. ಎಂಇಎಸ್ ಪುಂಡರು ಕನ್ನಡಿಗರ ಸ್ವಾಭಿಮಾನ ಕೆರಳಿಸುತ್ತಿದ್ದಾರೆ. ಕನ್ನಡಿಗರ ಮನೆಗಳಿಗೆ ಬೆಂಕಿ ಹಚ್ಚಿ ಪುಂಡಾಟಿಕೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ಸ್ವಾಭಿಮಾನ ಇದ್ದರೆ ಎಂಇಎಸ್ ನಿಷೇಧಿಸಲಿ. ಗೂಂಡಾ ಕಾಯ್ದೆಯಡಿ ಎಂಇಎಸ್ ಪುಂಡರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಉಗ್ರರಂತೆ ನಡೆದುಕೊಳ್ಳುತ್ತಿದ್ದಾರೆ. ಬೆಳಗಾವಿ ಜಿಲ್ಲೆ ರಾಜಕಾರಣಿಗಳು ತೆವಲಿಗಾಗಿ ಸಹಿಸಿಕೊಂಡಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್​ನವರು ಎಮ್‌ಇಎಸ್ ಸಹಿಸಿಕೊಂಡಿದ್ದಾರೆ. ಸೋಮವಾರ ಸದನದಲ್ಲಿ ಮಾತಾಡದಿದ್ದರೆ ರಾಜಕಾರಣಿಗಳಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು. ಗೂಂಡಾಗಿರಿ ಮಾಡುವ ಎಂಇಎಸ್ ಹುಚ್ಚರಿಗೆ ಪಾಠ ಕಲಿಸಬೇಕು. ಎಂಇಎಸ್ ನಿಷೇಧದ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದರೆ ರಾಜ್ಯದಲ್ಲಿ ಕರವೇ ಬೃಹತ್ ಹೋರಾಟ ಮಾಡಲಿದೆ ಎಂದು ನಾರಾಯಣಗೌಡ ಎಚ್ಚರಿಕೆ ನೀಡಿದರು. : –- – - -