ಗುತ್ತಿಗೆ ಕಾಮಗಾರಿಗಳಲ್ಲಿ ಭ್ರಷ್ಟಾಚಾರ: ವಿಧಾನ ಮಂಡಲದ ಸದನ ಸಮಿತಿ ತನಿಖೆಗೆ ಡಿಕೆ ಶಿವಕುಮಾರ್ ಆಗ್ರಹ ಬೆಂಗಳೂರು,ನವೆಂಬರ್.27,2021(,.)ಗುತ್ತಿಗೆ ಕಾಮಗಾರಿಗಳಲ್ಲಿ ಶೇ.40ರಷ್ಟು ಕಮೀಷನ್ ಭ್ರಷ್ಟಾಚಾರ ಕುರಿತು ತನಿಖೆಯನ್ನ ವಿಧಾನ ಮಂಡಲದ ಸದನ ಸಮಿತಿ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ಧಾರೆ. ಇಂದು ಮಾಧ್ಯಮಗಳ ಜತೆ ಈ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ಈಗಾಗಲೇ ರಾಜ್ಯಪಾಲರಿಗೆ ದೂರು ನೀಡಿ ಸರ್ಕಾರ ವಜಾಗೊಳಿಸಬೇಕೆಂದು ಮನವಿ ಮಾಡಿದೆ. ನೊಂದಾಯಿತ ಗುತ್ತಿಗೆದಾರರ ಸಂಘದಲ್ಲಿ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುವ ಒಂದು ಲಕ್ಷ ಮಂದಿ ಸದಸ್ಯರಿದ್ದಾರೆ. ಅವರು ಪ್ರಧಾನಿಯವರಿಗೆ ಪತ್ರ ಬರೆದು ರಾಜ್ಯದಲ್ಲಿ ಶೇ.40ರಷ್ಟು ಕಮೀಷನ್ ಪಡೆಯಲಾಗುತ್ತಿದೆ ಎಂದು ದೂರಿದ್ದಾರೆ. ಸುಮ್ಮನೆ ದೂರು ನೀಡಲು ಗುತ್ತಿಗೆದಾರರೇನೂ ದಡ್ಡರಲ್ಲ. ಜವಾಬ್ದಾರಿಯುತ ಪ್ರತಿಪಕ್ಷ ಕಾಂಗ್ರೆಸ್ ರಾಜ್ಯಪಾಲರಿಗೆ ದೂರು ನೀಡಿದೆ ಎಂದರೆ ವಿಷಯದಲ್ಲಿ ಗಂಭೀರತೆ ಇದೆ ಎಂದೇ ಅರ್ಥ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳ ಅಧಿಕಾರ ಅವಧಿಯದ್ದೂ ತನಿಖೆಯಾಗಲಿ. ಕಾಂಗ್ರೆಸ್ ಅವಧಿ ಸೇರಿದಂತೆ ಹಿಂದಿನ ಹತ್ತು ವರ್ಷಗಳ ಗುತ್ತಿಗೆ ಕಾಮಗಾರಿಗಳ ಬಿಲ್ ಪಾವತಿಯನ್ನು ತನಿಖೆ ನಡೆಸಲಿ. ಸಾರ್ವಜನಿಕರ ಹಣವನ್ನು ಯಾರೇ ದುರುಪಯೋಗಪಡಿಸಿಕೊಂಡಿದ್ದರೂ ಶಿಕ್ಷೆಯಾಗಬೇಕು ಎಂದು ಹೇಳಿದರು. : - – – -