ಮೊದಲು ಗೈಡ್ ಲೈನ್ ವರದಿ ಬದಿಗೊತ್ತಿ : ಮಳೆಹಾನಿಗೆ ಪರಿಹಾರ ನೀಡಿ- ಸರ್ಕಾರಕ್ಕೆ ಮಾಜಿ ಸಿಎಂ ಹೆಚ್.ಡಿಕೆ ಆಗ್ರಹ. ಮೈಸೂರು, ನವೆಂಬರ್,22,2021(..):ರಾಜ್ಯದಲ್ಲಿ 5 ರಿಂದ 6 ಲಕ್ಷ ಎಕ್ಟೆರ್ ಬೆಳೆ ನಷ್ಟ ಆಗಿದೆ. ಸರ್ಕಾರದ ಪರಿಹಾರದ‌ ಗೈಡಲೈನ್‌ ನಿಂದ ಜನರ ಸಮಸ್ಯೆ ಸರಿಪಡಿಸಲಾಗದು. ಗೈಡ್ ಲೈನ್ ವರದಿ ಇಟ್ಟುಕೊಂಡು ಪರಿಹಾರ ಕೊಡೋದು ಸರಿಯಲ್ಲ. ಮೊದಲು ಅದನ್ನ ಬದಿಗೊತ್ತಿ ನಷ್ಟವಾಗಿರುವ ಬಗ್ಗೆ ಪರಿಹಾರ ಕೊಡಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದರು. ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ರಾಜ್ಯದಲ್ಲಿ ರಸ್ತೆ, ಬ್ರಿಡ್ಜ್ ಹಾಳಾಗಿದೆ. 20ಕ್ಕೂ ಹೆಚ್ಚು ಜನರು ಸತ್ತಿದ್ದಾರೆ. ಸರ್ಕಾರದಲ್ಲಿರುವ ಮಂತ್ರಿಗಳು ಕಾಟಾಚಾರಕ್ಕೆ ಸರ್ವೆ ಮಾಡಬಾರದು. ಈಗಾಗಲೇ ಸಚಿವರು ಹೋಗಿ ಸರ್ವೆ ಮುಗಿಸಬೇಕಿತ್ತು. ಆದರೆ ಈ ವರೆಗೂ ಸರ್ಕಾರ ಆ ಕೆಲಸ ಮಾಡಿಲ್ಲ ಎಂದು ಕಿಡಿಕಾರಿದರು. ಈ ಸರ್ಕಾರದಲ್ಲಿ ಕೇವಲ ಘೋಷಣೆ ಮಾತ್ರ ಇದೆ. ಕೇವಲ ಹೋಗಿ ಪರಿಹಾರ ಘೋಷಣೆ ಮಾಡ್ತಾರೆ. ಸರ್ಕಾರಕ್ಕೆ ಆಕಾಶ ಮಾತ್ರ ಕಾಣುತ್ತಿದೆ, ಭೂಮಿ ಕಾಣ್ತಿಲ್ಲ. ಕೊಡಗಿನ ಜನರಿಗೆ ಈವರೆಗು ಸರಿಯಾಗಿ ಪರಿಹಾರ ಇಲ್ಲ. ಎಲ್ಲದಕ್ಕೂ ಕೂಡ ಒಂದು ಇತಿ ಮಿತಿ ಇದೆ. ಜನರು ರೊಚ್ಚಿಗೆದ್ದು ನಿಮ್ಮನ್ನ ತಿರಸ್ಕಾರ ಮಾಡುವ ಮುನ್ನ ಎಚ್ಚೆತ್ತುಕೊಳ್ಳಿ. ರೈತರಿಗೆ ಪರಿಹಾರ ಕೊಡುವುದರಲ್ಲಿ ನೀತಿ ಸಂಹಿತೆ ಅಡ್ಡ ಬರಲ್ಲ. ಇದನ್ನ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡರೆ ಆಯಿತು. ಅನುಮತಿ ಪಡೆದು ಪರಿಹಾರ ಕೊಡಬಹುದು. ಸರ್ಕಾರದಲ್ಲಿ ಹಣ ಇಲ್ಲ ಅಂತಾರೆ. ಆದರೆ ನನ್ನ ಪ್ರಕಾರದಲ್ಲಿ ಸರ್ಕಾರದಲ್ಲಿ ಹಣ ಇದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು. : - - -