ಶ್ರೀನಿವಾಸ್ ಮಾನೆ ಗೆಲುವು ಇಟ್ಟುಕೊಂಡು ಸಿದ್ಧರಾಮಯ್ಯ, ಡಿಕೆಶಿ ರಾಜಕೀಯ ಮಾಡುವುದು ಬೇಡ- ಶಾಸಕ ಎಂ.ಪಿ ರೇಣುಕಾಚಾರ್ಯ. ಬೆಂಗಳೂರು,ನವೆಂಬರ್,2,2021(..):ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಕೋವಿಡ್ ಸಮಯದಲ್ಲಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ಒಂದು ವೇಳೆ ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ಅದು ಕಾಂಗ್ರೆಸ್ ಗೆಲುವು ಅಲ್ಲ, ಅದು ಮಾನೆ ಗೆಲುವು. ಈ ಗೆಲುವನ್ನು ಇಟ್ಟುಕೊಂಡು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ರಾಜಕೀಯ ‌ಮಾಡಲು ಹೊರಡುವುದು ಬೇಡ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಟೀಕಿಸಿದರು. ಉಪಚುನಾವಣೆ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ, ಸಿಂದಗಿ ಮತ್ತು ಹಾನಗಲ್ ನಲ್ಲಿ ಬಿಜೆಪಿ ಗೆಲ್ಲುವ ನಿರೀಕ್ಷೆ ಇತ್ತು. ಅನಾರೋಗ್ಯದಿಂದ ಸಿ.ಎಂ. ಉದಾಸಿ ಕ್ಷೇತ್ರದಲ್ಲಿ ಓಡಾಡಲು ಸಾಧ್ಯವಾಗಿರಲಿಲ್ಲ. ಪಂಚಮಸಾಲಿ ಸಮುದಾಯ ಯಾವತ್ತೂ ಬಿಜೆಪಿ ಜೊತೆಗೆ ಇದೆ. ಸಮಾಜದಲ್ಲಿ ಯಾವುದೇ ಅಸಮಾಧಾನ ಇಲ್ಲ. ಸಮಾಜವನ್ನು ಬಿಜೆಪಿ ಯಾವತ್ತೂ ಗೌರವದಿಂದ ನೋಡುತ್ತದೆ. ಯಡಿಯೂರಪ್ಪ ಮೇರು ನಾಯಕ. ಯಡಿಯೂರಪ್ಪ ಅವರನ್ನು ಬಿಜೆಪಿ ಅಧಿಕಾರದಿಂದ ಕೆಳಗಿಳಿಸಿಲ್ಲ. ಸಿದ್ದರಾಮಯ್ಯ, ಶಿವಕುಮಾರ್ ಜನರಲ್ಲಿ ವಿಷಬೀಜ ಬಿತ್ತುವ ಪ್ರಯತ್ನ ಮಾಡ್ತಿದ್ದಾರೆ. ಯಡಿಯೂರಪ್ಪ ನಮ್ಮ ಪಕ್ಷದ ಅತ್ಯುನ್ನತ ನಾಯಕ ಎಂದರು. ಅಲ್ಪಸಂಖ್ಯಾತ ಮತಗಳು ಹಾನಗಲ್ ನಲ್ಲಿ ವಿಭಜನೆ ಆಗಿಲ್ಲ. ಸಿದ್ದರಾಮಯ್ಯ, ಕುಮಾರಸ್ವಾಮಿ ಸಂಘ ಪರಿವಾರ, ಬಿಜೆಪಿಯನ್ನು ಸ್ಪರ್ಧೆಗಿಳಿದು ಟೀಕೆ ಮಾಡಿದರು. ಬಿಜೆಪಿ ಗೆದ್ದರೆ ಅಲ್ಪಸಂಖ್ಯಾತರಿಗೆ ತೊಂದರೆ ಮಾಡುತ್ತಾರೆ ಅಂತಾ ಕಾಂಗ್ರೆಸ್ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಿದರು. ಅಲ್ಪಸಂಖ್ಯಾತ ಮತಗಳು ವಿಭಜನೆ ಆಗಬಾರದು ಅಂತಾ ಸಂಘ ಪರಿವಾರವನ್ನು ಟೀಕೆ ಮಾಡಿದರು. ಇದು ಕಾಂಗ್ರೆಸ್ ಗೆ ಎಲ್ಲೋ‌ ಒಂದು ಕಡೆ ವರದಾನ ಆಗಿರಬಹುದು ಎಂದು ರೇಣುಕಾಚಾರ್ಯ ತಿಳಿಸಿದರು. : – - – - - - .