ಮಾಜಿ ಸಿಎಂ ಬಿಎಸ್ ವೈ, ಡಿಕೆ ಶಿವಕುಮಾರ್ ಸೇರಿ 13 ಜನರ ವಿರುದ್ಧ ಎಸಿಬಿಗೆ ದೂರು. ಬೆಂಗಳೂರು,18,2021(..):ಭ್ರಷ್ಟಾಚಾರದ ಆರೋಪ ಹಿನ್ನೆಲೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿ 13 ಮಂದಿ ವಿರುದ್ಧ ತನಿಖೆ ಕೋರಿ ಸಾಮಾಜಿಕ ಕಾರ್ಯಕರ್ತ ಆಲಂ ಪಾಷಾ ಅವರು ಎಸಿಬಿಗೆ ದೂರು ಸಲ್ಲಿಕೆ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಗ್ಗೆ ಉಗ್ರಪ್ಪ ಮತ್ತು ಸಲೀಂ ಮಧ್ಯೆ ನಡೆದ ಸಂಭಾಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಬಿಎಸ್ ವೈ ಸೇರಿ 13 ಜನರ ವಿರುದ್ಧ ತನಿಖೆ ನಡೆಸುವಂತೆ ಹೆಲ್ಪಿಂಗ್ ಸಿಟಿಜನ್ ಅಂಡ್ ಪೀಪಲ್ಸ್ ಕೋರ್ಟ್ ಎಜಿಓ ಸಂಸ್ಥಾಪಕ ಆಲಂ ಪಾಷಾ ದೂರು ನೀಡಿದ್ದಾರೆ. ಸಲೀಂ ಹಾಗೂ ಉಗ್ರಪ್ಪ ಸಂಭಾಷಣೆ ಅಕ್ಷರಶಃ ಸತ್ಯವಾಗಿದೆ. ಕಾಂಗ್ರೆಸ್ ಪಕ್ಷದ ನಾಯಕರಿಗೆ ಡಿಕೆ ಶಿವಕುಮಾರ್ ಭ್ರಷ್ಟಾಚಾರದ ಬಗ್ಗೆ ಸಂಪೂರ್ಣ ಗೊತ್ತಿದೆ. ಡಿಕೆ ಶಿವಕುಮಾರ್ ನೀರಾವರಿ ಹಾಗೂ ಜಲ ಸಂಪನ್ಮೂಲ ಇಲಾಖೆ ಸಚಿವಾರಾಗಿದ್ದಾಗ ಭ್ರಷ್ಟಾಚಾರದ ಆರೋಪ‌ ಕೇಳಿಬಂದಿತ್ತು. ಡಿಕೆ ಶಿವಕುಮಾರ್ 8 ರಿಂದ 12 ಪರ್ಸೆಂಟೇಜ್ ಕಮಿಷನ್ ಪಡೆದಿದ್ದಾರೆಂದು ಆರೋಪಿಸಲಾಗತ್ತು. 2023ರ ಚುನಾವಣೆಗಾಗಿ ಕೋಟಿ ಕೋಟಿ ಭ್ರಷ್ಟಾಚಾರದ ಹಣ ಸಂಪಾದನೆಯ ಆರೋಪ ಇದಾಗಿದೆ. ಡಿಕೆ ಶಿವಕುಮಾರ್ ಅಕ್ರಮ‌ ಹಣ ಸಂಪಾದನೆ ಬಗ್ಗೆ ಗೊತ್ತಿದ್ದರೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಭ್ರಷ್ಟಾಚಾರದ ಬಗ್ಗೆ ಗೊತ್ತಿದ್ದೂ ಕೆಪಿಸಿಸಿ ಅಧ್ಯಕ್ಷಗಿರಿ ಕೊಟ್ಟ ರಾಹುಲ್ ಗಾಂಧಿಯ ವಿರುದ್ಧವೂ ಅರೋಪ ಮಾಡಲಾಗಿದೆ. ಭ್ರಷ್ಟಾಚಾರ ಪ್ರೋತ್ಸಾಹಿಸಿದ ಹಿನ್ನೆಲೆ ರಾಹುಲ್ ಗಾಂಧಿ ವಿರುದ್ಧವೂ ದೂರು ಇದೆ ಎಂದು ಆಲಂಪಾಷ ದೂರಿನಲ್ಲಿ ತಿಳಿಸಿದ್ದಾರೆ. ಇತ್ತೀಚಿಗೆ ನಡೆದ ಐಟಿ ಇಲಾಖೆಯ ಐಟಿ ದಾಳಿಯಲ್ಲಿ ನೀರಾವರಿ ಇಲಾಖೆಯ ಅಕ್ರಮದ ದಾಖಲೆಗಳು ಸಿಕ್ಕಿವೆ. ಲಂಚ ಪಡೆದು ಗುತ್ತಿಗೆದಾರರಿಗೆ ಸಾವಿರಾರು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಡಿಕೆ ಶಿವಕುಮಾರ್ ಮಾತ್ರವಲ್ಲ; ಮಾಜಿ ಸಿಎಂ ಯಡಿಯೂರಪ್ಪ ಅವರ ವಿರುದ್ಧವೂ ಈ ಅರೋಪ ಕೇಳಿಬಂದಿದೆ. ಆರೋಪಿಗಳ ವಿರುದ್ಧ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಕೋರಲಾಗಿದೆ. : 13 - - - - – .