ಚಾಮರಾಜನಗರ ಜಿಲ್ಲೆಗೆ ಹೋದ್ರೆ ಅಧಿಕಾರ ಹೋಗುತ್ತದೆ ಎಂಬುದು ಸರಿಯಲ್ಲ- ಸಿಎಂ ಬಸವರಾಜ ಬೊಮ್ಮಾಯಿ. ಮೈಸೂರು,ಅಕ್ಟೋಬರ್,6,2021(..):ನಾಳೆ ಮಾತ್ರ ಅಲ್ಲ ಇನ್ನೂ ಹಲವು ಬಾರಿಯೂ ನಾನು ಚಾಮರಾಜ ನಗರಕ್ಕೆ ಭೇಟಿ ನೀಡುತ್ತೇನೆ. ಅಲ್ಲಿಗೆ ಹೋದ್ರೆ ಅಧಿಕಾರ ಹೋಗುತ್ತದೆ ಎಂಬುದು ಸರಿಯಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ನಾಳೆ ಮೈಸೂರು ದಸರಾ ಉದ್ಘಾಟನೆ ಹಿನ್ನೆಲೆ ಮೈಸೂರಿಗೆ ಆಗಮಿಸಿರುವ ಸಿಎಂ ಬಸವರಾಜ ಬೊಮ್ಮಾಯಿ ಮಾಧ್ಯಮಗಳ ಜತೆ ಮಾತನಾಡಿ, ಸಿಎಂಗೆ ಎಲ್ಲಾ ಜಿಲ್ಲೆಗಳೂ ಒಂದೇ. ಅಲ್ಲಿಗೆ ಹೋದರೆ ಅಧಿಕಾರ ಹೋಗುತ್ತದೆ ಎಂಬುದು ಸರಿಯಲ್ಲ. ಅಲ್ಲಿಗೆ ಹೋಗದೆ ಇದ್ದವರಿಗೆ ಅಧಿಕಾರ ಶಾಶ್ವತವಾಗಿ ಉಳಿದಿದೆಯಾ..? ಎಂದು ಪ್ರಶ್ನಿಸಿದರು. ನನಗೆ ಬೇರೆಯವರ ರೀತಿ ಯಾವುದೇ ಭಯ ಇಲ್ಲ. ಇದು ನಂಬಿಕೆ ಅಪನಂಬಿಕೆ ಪ್ರಶ್ನೆ ಅಲ್ಲ. ಇದು ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯದ ಪ್ರಶ್ನೆ‌. ಆ ಕರ್ತವ್ಯವನ್ನ ನಾನು ಈಗ ಮಾಡುತ್ತಿದ್ದೇನೆ. ನಾಳೆ ಮಾತ್ರ ಅಲ್ಲ ಇನ್ನೂ ಹಲವು ಬಾರಿಯೂ ನಾನು ಚಾಮರಾಜ ನಗರಕ್ಕೆ ಭೇಟಿ ನೀಡುತ್ತೇನೆ ಎಂದು ಸ್ಪಷ್ಟನೆ ನೀಡಿದರು. ಬೆಂಗಳೂರಿನಲ್ಲಿ ರಸ್ತೆ ಗುಂಡಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ರಸ್ತೆಗಳ ಕಳಪೆ ಬಗ್ಗೆ ವರದಿ ತಯಾರಿಕೆಗೆ ಟಾಸ್ಕ್ ಪೋರ್ಸ್ ರಚನೆ ಮಾಡಿದ್ದೇನೆ. ಯಾವ ಅವಧಿಯಲ್ಲಿ ರಸ್ತೆ ಆಗಿದೆ. ರಸ್ತೆ ಗುಣಮಟ್ಟದಿಂದ ಮಾಡಲಾಗಿದೆಯೋ ಇಲ್ಲವೋ ಎಂಬುದರ ಬಗ್ಗೆ ವರದಿ ತರಿಸಿಕೊಳ್ಳುತ್ತೇನೆ‌. ಕಳಪೆ ಕಾಮಗಾರಿಯಿಂದ ರಸ್ತೆಯಲ್ಲಿ ಗುಂಡಿ ಬಿದ್ದಿದ್ದರೆ ಗುತ್ತಿಗೆದಾರನ ಮೇಲೆ ಕ್ರಮ ನಿಶ್ಚಿತ ಎಂದು ಹೇಳಿದರು. ಮಳೆ ಬಂದಾಗ ಮಾತ್ರ ಈ ವಿಚಾರ ಚರ್ಚೆ ಮಾಡಿ ನಂತರ ಸುಮ್ಮನಾಗುವುದಿಲ್ಲ. ಈ ವಿಚಾರದಲ್ಲಿ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಮಳೆ ಬಂದಾಗ ನಿರಂತರ ನೀರು ತುಂಬುವ ಪ್ರದೇಶ ಗುರುತು ಮಾಡಿ, ಅದಕ್ಕೆ ಶಾಸ್ವತ ಪರಿಹಾರ ಕಂಡು ಹಿಡಿಯಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. : - –-- -