67ನೇ ವನ್ಯಜೀವಿ ಸಪ್ತಾಹ ಆಚರಣೆ: ದಸರಾ ಆನೆಗಳು ಮತ್ತು ಶಾಲಾ ಮಕ್ಕಳೊಂದಿಗೆ ಪರಿಸರ ಜಾಥಾ ಕಾರ್ಯಕ್ರಮ. ಮೈಸೂರು,ಅಕ್ಟೋಬರ್,6,2021(..):2021ನೇ ಸಾಲಿನ 67ನೇ ವನ್ಯಜೀವಿ ಸಪ್ತಾಹ ಆಚರಣೆಯ ಅಂಗವಾಗಿ ಇಂದು ಮೈಸೂರು ಅರಮನೆಯ ಬಲರಾಮ ಗೇಟಿನ ಬಳಿ ದಸರಾ ಆನೆಗಳು ಹಾಗೂ ಶಾಲಾ ಮಕ್ಕಳೊಂದಿಗೆ ಪರಿಸರ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ವನ್ಯ ಜೀವಿ ಸಪ್ತಾಹದ ಅಂಗವಾಗಿ ವನ್ಯಜೀವಿ ಸಂಪತ್ತು ಸಂರಕ್ಷಣೆಗಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಮೈಸೂರು ವೃತ್ತದ ಸಿಸಿಎಫ್ ಟಿ.ಹೀರಾಲಾಲ್ ಮಾತನಾಡಿ 67ನೇ ವನ್ಯ ಜೀವಿ ಸಪ್ತಾಹವನ್ನು ಆಚರಿಸುತ್ತಿದ್ದೇವೆ. ಇಂದು ಬೆಳಿಗ್ಗೆಯಿಂದ ವನ್ಯ ಪ್ರಾಣಿಗಳ ಪ್ರಾಮುಖ್ಯತೆ, ಸಂರಕ್ಷಣೆ ಇದರ ಬಗ್ಗೆ ಅರಿವು ಮೂಡಿಸಲು ಚಿಕ್ಕದಾಗಿ ಒಂದು ಜಾಥಾವನ್ನು ಮಾಡಿದ್ದೇವೆ ಎಂದರು. ಇದರ ಪ್ರಾಮುಖ್ಯತೆ ಎಲ್ಲರಿಗೂ ಗೊತ್ತಿದೆ. ವನ್ಯಜೀವಿ ಸಪ್ತಾಹ 1957ರಿಂದ ಪ್ರಾರಂಭಿಸಿದ್ದೇವೆ. ಆಗಿನ ಸರ್ಕಾರ ವನ್ಯಜೀವಿಗಳ ಪ್ರಾಮುಖ್ಯತೆಯನ್ನು ಮನಗಂಡು ಸಪ್ತಾಹ ಆಚರಣೆ ಮಾಡಿದೆ. ಒಂದೊಂದು ಜೀವಿಗೂ ಪ್ರಾಮುಖ್ಯತೆ ನೀಡಿ ವನ್ಯ ಜೀವಿ ಸಪ್ತಾಹ ಆಚರಿಸುತ್ತಿದ್ದೇವೆ. ಈ ವರ್ಷ ಜಲಚರ ಸಂರಕ್ಷಣೆ ಮಾಡುವ ಘೋಷಣೆ ನಡೆಸಿದ್ದೇವೆ. ಶುದ್ಧ ನೀರಿನಲ್ಲಿರ ತಕ್ಕ ಜಲಚರವನ್ನು ಸಂರಕ್ಷಣೆ ಮಾಡುವುದು. ಸಿಹಿ ನೀರನ್ನು ಉಳಿಸುವುದೇ ಧ್ಯೇಯವಾಗಿದೆ. ಈ ಒಂದು ಅಭಿಯಾನದೊಂದಿಗೆ ವನ್ಯ ಜೀವಿ ಸಪ್ತಾಹವನ್ನು ಆಚರಿಸುತ್ತಿದ್ದೇವೆ. ಇದೇ ರೀತಿಯಾಗಿ ಮೈಸೂರು ವೃತ್ತ, ಮೈಸೂರು ವೃತ್ತಕ್ಕೆ ಹತ್ತಿರದಲ್ಲಿ ಬಂಡೀಪುರ ಹುಲಿಸಂರಕ್ಷಿತ ಪ್ರದೇಶಗಳು, ನಾಗರಹೊಳೆ ಸಂರಕ್ಷಿತ ಪ್ರದೇಶಗಳು, ಬಿಆರ್ ಟಿ ಈ ಪ್ರದೇಶದಲ್ಲಿಯೇ ಸರಿಸುಮಾರು 320ಹುಲಿಗಳು ಇವೆ. ಕರ್ನಾಟಕ ರಾಜ್ಯ ಹುಲಿ ಸಂಖ್ಯೆಯಲ್ಲಿ ಎರಡನೇ ರಾಜ್ಯ. 524ಹುಲಿಗಳಿವೆ. ಇಲ್ಲಿ ಮುನ್ನೂರ ಇಪ್ಪತ್ತು ಹುಲಿಗಳು ವಾಸವಾಗಿರುವುದು ನಮಗೆ ಹೆಮ್ಮೆಯ ವಿಚಾರ. ಬರಿ ಹುಲಿ ಅಂತ ಅಷ್ಟೇ ಅಲ್ಲ, ಎಲ್ಲ ಪ್ರಾಣಿಗಳನ್ನು, ಪಕ್ಷಿಗಳನ್ನು, ಪ್ರಭೇದಗಳನ್ನು ಜಲಚರಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಚಿಕ್ಕದಾಗಿಯಾದರೂ ಸಂದೇಶ ನೀಡಬೇಕೆಂಬ ದೃಷ್ಟಿಯಲ್ಲಿ ಸಾಂಕೇತಿಕವಾಗಿ ಆಚರಣೆ ಮಾಡಿದ್ದೇವೆ ಎಂದು ತಿಳಿಸಿದರು. ಈ ಸಂದರ್ಭ ಹಿರಿಯ ಅಧಿಕಾರಿ ಜಗತ್ ರಾಮ್, ಡಿಸಿಎಫ್ ಕರಿಕಾಳನ್, ಕಮಲ‌ಕರಿಕಾಳನ್, ವೈದ್ಯ ರಮೇಶ್ ಸೇರಿದಂತೆ ಇತರೆ‌ ಅಧಿಕಾರಿಗಳು ಆನೆಗಳ ಮಾವುತರು ಭಾಗವಹಿಸಿದ್ದರು. : 67th - –- - -