ಮೈಸೂರು ದಸರಾ ಸಮೀಪಿಸುತ್ತಿರುವ ಹಿನ್ನೆಲೆ: ನಗರದಾದ್ಯಂತ ಪೊಲೀಸ್ ಭದ್ರತೆ – ಪೊಲೀಸ್ ಆಯುಕ್ತ ಚಂದ್ರಗುಪ್ತ. ಮೈಸೂರು,ಸೆಪ್ಟಂಬರ್,23,2021(..):ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆ, ಮೈಸೂರು ನಗರದಾದ್ಯಂತ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ತಿಳಿಸಿದರು. ಮೈಸೂರಿನಲ್ಲಿ ಇಂದು ಮಾತನಾಡಿದ ಪೊಲೀಸ್ ಆಯುಕ್ತ ಚಂದ್ರಗುಪ್ತ, ಮೈಸೂರು ದಸರಾ ಸಮೀಪಿಸುತ್ತಿದ್ದು, ಸಾರ್ವಜನಿಕರು ಅನಾಮಧೇಯ ವ್ಯಕ್ತಿಗಳು, ವಸ್ತುಗಳು ಕಂಡು ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ‌ ನೀಡಿ ಸಹಕರಿಸಬೇಕು. ಮನೆಗಳ ಮಾಲೀಕರು ಮನೆಗಳನ್ನು ಬಾಡಿಗೆ ನೀಡುವ ಮುನ್ನಾ ಬಾಡಿಗೆದಾರರ ಪೂರ್ವಾಪರಗಳ‌ನ್ನು ವಿಚಾರಿಸಬೇಕು ಎಂದು ತಿಳಿಸಿದರು. ಮೈಸೂರಿನ ವಾಣಿಜ್ಯ ತೆರಿಗೆ ಭವನಕ್ಕೆ ಬಾಂಬ್ ಬೆದರಿಕೆ ಬಂದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕಟ್ಟಡ ಪರಿಶೀಲನೆ ವೇಳೆ ಯಾವುದೇ ರೀತಿಯ ಸ್ಪೋಟಕ ವಸ್ತು ಪತ್ತೆಯಾಗಿಲ್ಲ. ಆದರೂ ಯಾರಿಂದ ಈ ರೀತಿ ಬೆದರಿಕೆ ಬಂದಿದೆ ಎಂಬುದರ ಕುರಿತು ತನಿಖೆ ಮುಂದುವರಿದಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ ಚಂದ್ರಗುಪ್ತ ತಿಳಿಸಿದರು. : – - - -