ಅಧಿಕಾರಿಗಳನ್ನ ಮಟ್ಟ ಹಾಕದಿದ್ರೆ ಸರ್ಕಾರದ ಆಸ್ತಿಯನ್ನ ಲೂಟಿ ಮಾಡ್ತಾರೆ- ಶಾಸಕ ಸಾ.ರಾ ಮಹೇಶ್ ಆಕ್ರೋಶ. ಬೆಂಗಳೂರು,ಸೆಪ್ಟಂಬರ್,16,2021(..):ವಿಧಾನಸಭೆ ಕಲಾಪದಲ್ಲಿ ಅಧಿಕಾರಿಗಳ ವಿರುದ್ಧ ಜೆಡಿಎಸ್ ಶಾಸಕ ಸಾರಾ ಮಹೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಶಾಸಕ ಸಾ.ರಾ ಮಹೇಶ್, ಅಧಿಕಾರಿಗಳನ್ನ ಮಟ್ಟ ಹಾಕದಿದ್ರೆ ಸರ್ಕಾರದ ಆಸ್ತಿಯನ್ನ ಲೂಟಿ ಮಾಡ್ತಾರೆ. ಇಂತಹ ಅಧಿಕಾರಿಗಳ ಮುಂದೆ ಬದುಕಲು ಆಗುತ್ತೇನ್ರಿ. ಒಬ್ಬ ಮಂತ್ರಿ ಮನೆ ನವೀಕರಣಕ್ಕೆ 5 ಲಕ್ಷ ನೀಡಲಾಗುತ್ತದೆ. ಆದರೆ ಅಧಿಕಾರಿಗಳಿಗೆ ಮನೆ ನವೀಕರಣಕ್ಕೆ 50 ಲಕ್ಷ ಕೊಡ್ತಾರೆ. ಕೆಲವು ಅಧಿಕಾರಿಗಳು ಭ್ರಷ್ಟರಾಗಿ, ಜನರ ತೆರಿಗೆ ಹಣದಲ್ಲಿ ಶೋಕಿ ಮಾಡಿಕೊಂಡು ಬದುಕುತ್ತಿದ್ದಾರೆ ಎಂದು ಕಿಡಿಕಾರಿದರು. ಐಪಿಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಮತ್ತೆ ಪರೋಕ್ಷ ವಾಗ್ದಾಳಿ ನಡೆಸಿ ಶಾಸಕ ಸಾ.ರಾ ಮಹೇಶ್, ಒಂದು ಬ್ಯಾಗ್ ವಿಚಾರದಲ್ಲಿ ಆರೂವರೆ ಕೋಟಿ ನುಂಗಿದ್ದಾರೆ. ಕೆಲ ಐಎಎಸ್ ಅಧಿಕಾರಿಗಳು ರೂ 35 ಲಕ್ಷ ವೆಚ್ಚದಲ್ಲಿ ಈಜುಕೊಳ ಕಟ್ಟಿ ಶೋಕಿ ಮಾಡುತ್ತಾರೆ. ಇವರ ವಿರುದ್ಧ ಯಾರು ಕ್ರಮ ಕೈಗೊಳ್ಳುತ್ತಾರೆ ಎಂದು ಪ್ರಶ್ನೆ ಮಾಡಿದರು. ನಿವೃತ್ತಿಯ ಬಳಿಕ ಇಂಥವರು ನಮ್ಮ ವಿರುದ್ಧವೇ ಚುನಾವಣೆಗೆ ನಿಲ್ಲುತ್ತಾರೆ. ಇಂಥವರಿಂದ ನಮಗೆ ರಕ್ಷಣೆ ಕೊಡಿಸಿ. ಅವರ ವಸತಿ‌ ಗೃಹಕ್ಕೆ ಯಾಕೆ 5 ಎಕರೆ ಭೂಮಿ ಬೇಕು? ಐಎಎಸ್, ಐಪಿಎಸ್ ಅಧಿಕಾರಿಗಳ ಮನೆಗಳ ಮೇಲೆ ಎಂದಾದರೂ ಐಟಿ ರೇಡ್ ಆಗುತ್ತಾ? ಕೇವಲ ಎಂಜಿನಿಯರ್, ಸಣ್ಣಪುಟ್ಟ ಅಧಿಕಾರಿಗಳ ಮನೆಗಳ ಮೇಲೆ ಮಾತ್ರ ರೇಡ್ ಆಗುತ್ತೆ. ಬಿ.ಎಸ್.ಯಡಿಯೂರಪ್ಪ ಇದ್ದಾಗಲೂ ಇವರೇ ಅಧಿಕಾರಿ, ಸಿದ್ದರಾಮಯ್ಯ ಇದ್ದಾಗಲೂ ಇದೇ ಅಧಿಕಾರಿ ಇಂತಹ ಅಧಿಕಾರಿಗಳಿಂದ ನಮಗೆ ರಕ್ಷಣೆ ಕೊಡಿಸಿ ಎಂದು ಸಾ.ರಾ ಮಹೇಶ್ ಸದನದಲ್ಲಿ ಕಿಡಿಕಾರಿದರು. : - –-- .