ಹೋರಾಟಗಾರರ ಹೆಸರಿನಲ್ಲಿ ಮೈಸೂರಿನ ಪರಂಪರೆಗೆ ಮಸಿ ಬಳಿಸುತ್ತಿದ್ದಾರೆ- ಮಾಜಿ ವಿಧಾನ ಪರಿಷತ್ ಸದಸ್ಯ ಡಿ.ಮಾದೇಗೌಡ ಕಿಡಿ. ಮೈಸೂರು,ಸೆಪ್ಟಂಬರ್,15,2021(..):ಎನ್ ಟಿಎಂ ಶಾಲೆ ಉಳಿಸಿ ಹೋರಾಟ ಮತ್ತು ಮೈಸೂರು ವಿವೇಕ‌ ಸ್ಮಾರಕ ನಿರ್ಮಾಣ ವಿವಾದ ವಿಚಾರ ಸಂಬಂಧ ಹೋರಾಟಗಾರರ ಹೆಸರಿನಲ್ಲಿ ಮೈಸೂರಿನ ಪರಂಪರೆಗೆ ಮಸಿ ಬಳಿಸುತ್ತಿದ್ದಾರೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಡಿ.ಮಾದೇಗೌಡ ಕಿಡಿ ಕಾರಿದರು. ಮೈಸೂರು ರಾಮಕೃಷ್ಣಾಶ್ರದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ ಶ್ರೀಗಳು ಸುದ್ದಿಗೋಷ್ಠಿ ನಡೆಸಿ ವಿವೇಕ ಸ್ಮಾರಕ ಹಾಗೂ ನಿರಂಜನ ಮಠದ ಸತ್ಯಾಂಶಗಳ ಕುರಿತು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಡಿ.ಮಾದೇಗೌಡ, ಹಿರಿಯ ಸಾಹಿತಿ ಸಿಪಿಕೆ, ಸಾಹಿತಿ ಕೆ.ಬಿ.ಪ್ರಭುಪ್ರಸಾದ್, ಸಾಹಿತಿ ಲೀಲಾಪ್ರಸಾದ್, ವಿಶ್ರಾಂತ ಕುಲಪತಿಗಳಾದ ಡಾ.ಚಿದಾನಂದಗೌಡ, ಶಶಿಧರಪ್ರಸಾದ್ ಸೇರಿ ಹಲವರು ಉಪಸ್ಥಿತರಿದ್ದರು. ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಡಿ.ಮಾದೇಗೌಡ, ಈ ಸುದ್ದಿಗೋಷ್ಠಿ ಯಾರ ವಿರುದ್ಧವೂ ಅಲ್ಲ. ಇದು ಕೇವಲ ವಿವೇಕ ಸ್ಮಾರಕದ ಸತ್ಯಾಂಶ ಹಾಗೂ ವಾಸ್ತವತೆ ತಿಳಿಸುವ ಸುದ್ದಿಗೋಷ್ಠಿಯಾಗಿದೆ. ಕಳೆದ ಕೆಲದಿನಗಳಿಂದ ರಾಮಕೃಷ್ಣಾಶ್ರಮದಿಂದ ಸಾಂಸ್ಕೃತಿಕ ದಾಳಿ ಆಗ್ತಿದೆ. ದೇಶದ ಹಲವು ಕಡೆ ವಿವೇಕ ಸ್ಮಾರಕ ನಿರ್ಮಾಣಕ್ಕೆ ಮನಮೋಹನ್ ಸಿಂಗ್ ಕಾಲದಲ್ಲೇ ನಿರ್ಧಾರ ಮಾಡಲಾಗಿತ್ತು. ರಾಮಕೃಷ್ಣ ಆಶ್ರಮಕ್ಕೆ ಆಸ್ತಿ ನೀಡಿದ್ದೇ ಸರ್ಕಾರ. 2013ರಲ್ಲಿ ನಿರಂಜನ ಮಠ, ಎನ್ ಟಿಎಂ ಶಾಲೆ ಸೇರಿ 4000ಚ.ಮೀ ಜಾಗವನ್ನು ಮಠಕ್ಕೆ ಹಸ್ತಾಂತರ ಮಾಡಲಾಗಿತ್ತು. ಆಗ ಅನೇಕರು ಕೋರ್ಟ್ ಗೆ ಹೋದರೂ ಕೂಡಾ ಆಶ್ರಮದ ಪರ ತೀರ್ಪು ಬಂತು. ಅವರಿಗೆ ಕೋರ್ಟ್ ಛೀಮಾರಿ ಹಾಕಿತ್ತು ಎಂದರು. ಅಂತಿಮವಾಗಿ ರಾಜ್ಯದ ಉಚ್ಚನ್ಯಾಯಾಲಯದ ತೀರ್ಪು ನೀಡಿದೆ. ಈಗ ಅವರೆಲ್ಲ ಸೇರಿ ಬೀದಿ ನಾಟಕ ಮಾಡ್ತಿದ್ದಾರೆ. ಇದು ಮೈಸೂರಿಗೆ ಗೌರವ ತಂದುಕೊಡುತ್ತಾ. ನ್ಯಾಯಾಲಯದ ಆದೇಶವನ್ನು ಧಿಕ್ಕರಿಸುವ ಕೆಟ್ಟ ಪರಂಪರೆ ಬೆಳೆಸುತ್ತಿದ್ದಾರೆ. ಸದರಿ ಜಾಗದಲ್ಲಿದ್ದವರರನ್ನು ಅಲ್ಲಿಂದ ದಬ್ಬಿ ಹಲ್ಲೆ ನಡೆಸಿ ಬೀಗ ಹಾಕಿದ್ದಾರೆ. ಹೋರಾಟಗಾರರ ಹೆಸರಿನಲ್ಲಿ ಮೈಸೂರಿನ ಪರಂಪರೆಗೆ ಮಸಿ ಬಳಿಸುತ್ತಿದ್ದಾರೆ ಎಂದು ಡಿ. ಮಾದೇಗೌಡ ಕಿಡಿಕಾರಿದರು. : - - -