ರೇಣುಕಾಸ್ವಾಮಿ ಕೊಲೆ ಕೇಸ್: ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಲಿ- ಇಂದ್ರಜಿತ್ ಲಂಕೇಶ್ ಹುಬ್ಬಳ್ಳಿ,ಜೂನ್,13, 2024 (..):ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ ಎಂದು ನಟ, ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಆಗ್ರಹಿಸಿದರು. ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಇಂದ್ರಜಿತ್ ಲಂಕೇಶ್, ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆಯನ್ನು ಇಡೀ ಚಿತ್ರರಂಗ ಖಂಡಿಸುತ್ತದೆ. ಅಪರಾಧ ಕೃತ್ಯದಲ್ಲಿ ಸಿನಿಮಾ ನಟನಾಗಲಿ ಹಾಗೂ ರಾಜಕಾರಣಿ ಆಗಲಿ ಯಾರೇ ಭಾಗಿಯಾಗಿದ್ದರೂ ಸರಿ ರಾಜ ಮರ್ಯಾದೆ ಕೊಡಬಾರದು. ಯಾರೇ ಕೊಲೆ ಮಾಡಿದರೂ ಅವರಿಗೆ ಕಠಿಣ ಶಿಕ್ಷೆಆಗಲಿ ಎಂದರು. ಕೊಲೆ ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೊಲೆ ಆರೋಪಿ ಯಾರು ಎಂದು ಸ್ಪಷ್ಟಪಡಿಸಿದ ನಂತರ ಮೃತರ ಕುಟುಂಬದ ಪರವಾಗಿ ನಾನು ಪ್ರತಿಭಟನೆ ಮಾಡುತ್ತೇನೆ. ಸರ್ಕಾರ ಈ ಕುರಿತು ಕ್ರಮ ಕೈಗೊಂಡು ರೇಣುಕಾಸ್ವಾಮಿ ತಂದೆ, ತಾಯಿ ಹಾಗೂ ಪತ್ನಿಗೆ ನ್ಯಾಯ ಒದಗಿಸಿಕೊಡಲಿ ಎಂದು ಒತ್ತಾಯಿಸಿದರು. ಮಾಧ್ಯಮದವರ ಮೇಲೆ ಹಲ್ಲೆ ಆರೋಪ ಕುರಿತು ಪ್ರತಿಕ್ರಿಯಿಸಿದ ಇಂದ್ರಜಿತ್ ಲಂಕೇಶ್, ಮಾಧ್ಯಮದವರು ವಾಸ್ತವ ವರದಿ ಮಾಡಿದ್ದರಿಂದ ರೇಣುಕಾಸ್ಟಾಮಿ ಪ್ರಕರಣ ಗಂಭೀರತೆ ಪಡದಿದೆ. ಇಲ್ಲದಿದ್ದರೆ ಇದನ್ನು ಕಸದ ಬುಟ್ಟಿಗೆ ಎಸೆಯುವ ಸಾಧ್ಯತೆ ಇತ್ತು. ಬೆಂಗಳೂರಿನಲ್ಲಿ ಮಾಧ್ಯಮದವರ ಮೇಲೆ ಹಲ್ಲೆ ನಡೆದಿದ್ದು ಖಂಡನೀಯ. ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು. ಇನ್ನು ನನ್ನ ಸಹೋದರಿ ಗೌರಿ ಕೊಲೆಗೆ ಇನ್ನೂ ನ್ಯಾಯ ಸಿಕ್ಕಿಲ್ಲ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅವರ ಪತ್ನಿಗೂ ಅನ್ಯಾಯವಾಗಿದೆ. ಅವರಿಗೂ ನ್ಯಾಯ ಕೊಡಿಸುವ ಕೆಲಸ ಆಗಬೇಕು ಎಂದರು. : , , ,