ಬೆಂಗಳೂರು-ಮೈಸೂರು ಹೆದ್ದಾರಿ ಕ್ರೆಡಿಟ್ ಜಟಾಪಟಿ: ಪ್ರತಾಪ್ ಸಿಂಹ-ಕಾಂಗ್ರೆಸ್ ಬಹಿರಂಗ ಚರ್ಚೆ ‘ಠುಸ್’! ಮೈಸೂರು, ಸೆಪ್ಟೆಂಬರ್ 05, 2021 (..):ಮೈಸೂರು-ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಕ್ರೆಡಿಟ್ ವಿಚಾರದಲ್ಲಿ ಕಾಂಗ್ರೆಸ್ ಪ್ರತಾಪ್ ಸಿಂಹ ನಡುವೆ ಜಟಾಪಟಿ ಮುಂದುವರಿದಿದೆ. ಕಾಮಗಾರಿಗೆ ಕಾಂಗ್ರೆಸ್ ಎಂಟು ಪೈಸೆಯನ್ನು ನೀಡಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಅವರನ್ನು ಇಂದು ಬಹಿರಂಗ ಚರ್ಚೆಗೆ ಕಾಂಗ್ರೆಸ್ ಆಹ್ವಾನಿಸಿತ್ತು. ಮೈಸೂರಿನ ಪತ್ರಕರ್ತರ ಭವನಕ್ಕೆ ಬರುವಂತೆ ಪ್ರತಾಪ್ ಸಿಂಹಗೆ ಪಂಥಾಹ್ವಾನ ನೀಡಿದ್ದ ಕಾಂಗ್ರೆಸ್ ನಾಯಕರು. ಆದರೆ ಬಹಿರಂಗ ಚರ್ಚೆಗೆ ಪ್ರತಾಪ್ ಸಿಂಹ ಬರದೇ ದೂರ ಉಳಿದಿದ್ದಾರೆ. ಖಾಲಿ ಕುರ್ಚಿಗೆ ಪ್ರತಾಪ್ ಸಿಂಹ ಹೆಸರಿನ ಚೀಟಿ ಅಂಟಿಸಿ ಸುದ್ದಿಗೋಷ್ಠಿಯನ್ನು ಕಾಂಗ್ರೆಸ್ ನಾಯಕರು ನಡೆಸಿದ್ದಾರೆ. ಪ್ರತಾಪ್ ಸಿಂಹ ಅವರು ಫಲಾಯನ ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದರು. ಅವರಿಗೆ ಬದ್ದತೆಯಿದ್ದರೆ ಬರಬೇಕಿತ್ತು. ಮೈಸೂರು ಕೊಡಗು ಜನರ ಬಗ್ಗೆ ಕಿಂಚಿತ್ ಕಾಳಜಿ ಇದ್ದರೆ ಮುಂದಿನ ದಿನಗಳಲ್ಲಿ ಪ್ರತಾಪ್ ಸಿಂಹ ಮಾತನಾಡಬಾರದು. ಇಂದು ನಾವು ದಾಖಲೆಗಳೊಂದಿಗೆ ಬಂದಿದ್ದೇವೆ, ದಾಖಲೆಗಳು ಸುಳ್ಳಾಗುತ್ತವೆಯಾ? ನಾವು ಇದನ್ನು ಇಲ್ಲಿಗೇ ಬಿಡೋದಿಲ್ಲ. ಮುಂದಿನ ಶನಿವಾರ, ಭಾನುವಾರವೂ ನಿಮ್ಮ ಕಚೇರಿ ಬಳಿಗೆ ಬಂದು ಪ್ರದರ್ಶನ ಮಾಡುತ್ತೇವೆ‌. ನೀವು ಹೇಳಿರುವ ಸುಳ್ಳನ್ನು ಒಪ್ಪಿಕೊಳ್ಳುವವರೆಗೂ ನಾವು ಬಿಡುವುದಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಮೈಸೂರಿನಲ್ಲಿ ಹೇಳಿದರು. : -