ರಾಜೀನಾಮೆ ನೀಡುವಾಗ ಬಿಎಸ್ವೈ ಕಣ್ಣೀರು ಸುರಿಸಿದ್ದೇಕೆ ಎಂಬ ಕಥೆ ನಮಗೆ ಗೊತ್ತು ಎಂದಿದ್ದೇಕೆ ಡಿಕೆಶಿ !? ಬೆಂಗಳೂರು, ಆಗಸ್ಟ್, 29, 2021 (..): ರಾಜೀನಾಮೆ ಘೋಷಣೆ ವೇಳೆ ಗದ್ಗದಿತರಾಗಿ ಬಿಎಸ್ವೈ ಕಣ್ಣೀರಿಟ್ಟದ್ದಕ್ಕೆ ಕಾರಣವೇನು ಎಂಬುದು ನಮಗೆ ಗೊತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಅಧಿಕಾರ ತ್ಯಾಗ ಮಾಡುವಾಗ ಬಿಎಸ್ ವೈ ಕಣ್ಣೀರಿಟ್ಟರು. ಕಣ್ಣೀರಿಗೆ ಕಾರಣವೇನು ಎಂಬುದು ಗೊತ್ತು. ಭಾರಿ ಪ್ರಮಾಣದ ಭ್ರಷ್ಟಾಚಾರದ ಬಗ್ಗೆ ಶಾಸಕ ಅರವಿಂದ್ ಬೆಲ್ಲದ್ ಅವರೇ ಹೇಳಿದ್ದಾರೆ. ಇದೇ ಕಾರಣಕ್ಕೆ ಬಿಎಸ್ವೈ ಅಧಿಕಾರದಿಂದ ಕೆಳಗಿಳಿಯಬೇಕಾಯಿತು ಎಂದು ತಿಳಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ, ಆಕ್ಸಿಜನ್, ಬೆಡ್ ನಿರ್ವಹಣೆಗಳ ವಿಚಾರದಲ್ಲಿ ದೊಡ್ಡಮಟ್ಟದಲ್ಲಿ ಭ್ರಷ್ಟಾಚಾರ ಹಗರಣ ನಡೆದಿದೆ. ಕೋವಿಡ್ ನಿಂದ ಸಂಕಷ್ಟಕ್ಕೀಡಾದ ಜನ ಆಸ್ಪತ್ರೆ, ಆಂಬುಲೆನ್ಸ್ ಗಳಿಗಾಗಿ ಬೀದಿ ಬೀದಿಗಳಲ್ಲಿ ಕ್ಯೂ ನಿಂತಿದ್ದಾರೆ. ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ಇದನ್ನು ಆಡಳಿತ ಪಕ್ಷದ ಶಾಸಕರೇ ಹೇಳಿದ್ದಾರೆ ಎಂದು ಡಿಕೆಶಿ ತಿಳಿಸಿದ್ದಾರೆ.