ನಾಳೆ ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆ: ಏಕಾಏಕಿ ದೇವರಾಜ ಮಾರುಕಟ್ಟೆ ಸ್ಥಳಾಂತರಿಸಿದ್ದಕ್ಕೆ ಹೂ ವ್ಯಾಪಾರಿಗಳ ಆಕ್ರೋಶ. ಮೈಸೂರು,ಆಗಸ್ಟ್,19,2021(..):ನಾಳೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಈ ಹಿನ್ನೆಲೆಯಲ್ಲಿ ಜನರು ಕೊರೋನಾ ನಿಯಮ ಮರೆತು ಹೂ ಹಣ್ಣು ಖರೀದಿಸಲು ಮುಗಿಬೀಳುವ ಸಾಧ್ಯತೆ ಹಾಗೂ ಕೊರೊನಾ 3ನೇ ಅಲೆ ಆತಂಕ ಹೆಚ್ಚಾದ ಹಿನ್ನೆಲೆಯಲ್ಲಿ ನಗರದ ದೇವರಾಜ ಮಾರುಕಟ್ಟೆಯನ್ನ ಜೆ.ಕೆ.ಮೈದಾನಕ್ಕೆ ಸ್ಥಳಾಂತರ ಮಾಡಲಾಗಿದೆ. ನಿನ್ನೆ ಸಂಜೆ ಮಾರುಕಟ್ಟೆ ಸ್ಥಳಾಂತರ ಮಾಡಿ ಮೈಸೂರು ಮಹಾ ನಗರ ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಈ ನಡುವೆ ಮಾರುಕಟ್ಟೆ ಸ್ಥಳಾಂತರಕ್ಕೆ ಹೂ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಕಾಏಕಿ ಮಾರುಕಟ್ಟೆ ಸ್ಥಳಾಂತರದಿಂದ ಹೂ ವ್ಯಾಪಾರಕ್ಕೆ ತೊಂದರೆಯಾಗಿದೆ. ಬೆಳಿಗ್ಗೆಯಿಂದ ಹೂ ವ್ಯಾಪಾರವಾಗಿಲ್ಲ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ. ಇಲ್ಲಿ ಬೆಳಿಗ್ಗೆ 8ಗಂಟೆಯಿಂದ ಮಾರಾಟ ಮಾಡಲು ಅವಕಾಶ ನೀಡಿದ್ದಾರೆ. ಇಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಹೂ ಇಡಲು ಸರಿಯಾದ ವ್ಯವಸ್ಥೆ ಇಲ್ಲ. ದೇವರಾಜ ಮಾರುಕಟ್ಟೆ ಬಸ್ ನಿಲ್ದಾಣಕ್ಕೆ ಹತ್ತಿರವಿದ್ದರಿಂದ ಹೆಚ್ಚಿನ ಜನ ಬರ್ತಿದ್ರು. ಆದ್ರೆ ಜೆ.ಕೆ.ಮೈದಾನಕ್ಕೆ ಜನ ಬರೋದು ಕಡಿಮೆ ಎಂದು ಹೂ ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಕೊರೊನಾ ಬಗ್ಗೆ ನಮಗೂ ಅರಿವಿದೆ, ಮುಂಜಾಗ್ರತಾ ಕ್ರಮಗಳ ಬಗ್ಗೆ ಗೊತ್ತಿದೆ. ದೇವರಾಜ ಮಾರುಕಟ್ಟೆಯಲ್ಲೇ ಕೊರೊನಾ ಮುಂಜಾಗ್ರತಾ ಕ್ರಮ ವಹಿಸಿ ವ್ಯಾಪಾರಕ್ಕೆ ಅನುಮತಿ ನೀಡಬೇಕು. ಪಾಲಿಕೆ ಅಧಿಕಾರಿಗಳು ಮೊದಲೇ ಲಾಕ್ಡೌನ್ ನಿಂದ ಸಂಕಷ್ಟಕ್ಕೀಡಾಗಿರುವ ವ್ಯಾಪಾರಸ್ಥರ ಹಿತ ಕಾಯುವಂತೆ ಮನವಿ ಮಾಡಿದ್ದಾರೆ. : – -- - –- -