ನಾವೇನು ನಿರುದ್ಯೋಗಿಗಳಾ.? ಎಸ್.ಎ.ರಾಮದಾಸ್ ಅವರನ್ನು ಮಂತ್ರಿ ಮಾಡಿ : ಎಚ್.ವಿಶ್ವನಾಥ್ ಮೈಸೂರು, ಆ.16, 2021 : (.. ) ಜಿಲ್ಲಾ ಉಸ್ತುವಾರಿ ಸಚಿವ‌ ಎಸ್.ಟಿ.‌ ಸೋಮಶೇಖರ್ ಬಗ್ಗೆ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ತೀವ್ರ ಅಸಮಾಧಾನ. ಸಚಿವರು ಬೆಂಗಳೂರಿನಿಂದ ಮೈಸೂರಿಗೆ ಕಾರಿನಲ್ಲಿ ಬರುವಾಗ ಫೋನ್ ಮಾಡಿಸುತ್ತಾರೆ. ಎರಡು ಮೂರು ಗಂಟೆ ಮುಂಚಿತವಾಗಿ ಸಭೆಗೆ ಬರುವಂತೆ ಫೋನ್‌ನಲ್ಲಿ ಆಹ್ವಾನ ಕೊಡುತ್ತಾರೆ. ನಾವೇನು ನಿರುದ್ಯೋಗಿಗಳಾ.? ನೀವು ಕರೆದ ಕೂಡಲೇ ಓಡಿ ಬರೋಕೆ ಎಂದು ಸಚಿವರನ್ನು ತರಾಟೆ ತೆಗೆದುಕೊಂಡರು ವಿಶ್ವನಾಥ್. ಸೋಮವಾರ ಮೈಸೂರು ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಡಗೂರು ಎಚ್.ವಿಶ್ವನಾಥ್ ಹೇಳಿದಿಷ್ಟು… ಒಂದು ದಿನ ಮುಂಚಿತವಾಗಿ ಜನಪ್ರತಿನಿಧಿಗಳಿಗೆ ಸಭೆಗೆ ಆಹ್ವಾನ ನೀಡಬೇಕು. ಆದರೆ ಸಚಿವ ಸೋಮಶೇಖರ್, ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿರುವಾಗ ದಾರಿಯಲ್ಲಿ ಫೋನ್ ಮಾಡಿಸಿ ನಮ್ಮನ್ನು ಸಭೆಗೆ ಬರುವಂತೆ ಆಹ್ವಾನಿಸುತ್ತಾರೆ. ಇದು ಸರಿಯಾದ ನಡವಳಿಕೆಯಲ್ಲ. ನಮ್ಮನ್ನು ಟೇಕನ್ ಫಾರ್ ಗ್ರ್ಯಾಂಟೆಂಡ್ ಅಂದು ಕೊಂಡಿದ್ದಾರೆ ಜಿಲ್ಲಾ ಉಸ್ತುವಾರಿ ಸಚಿವರು ಎಂದು ವಿಶ್ವನಾಥ್ ಹರಿಹಾಯ್ದರು. ರಾಮದಾಸ್ ರನ್ನು ಮಂತ್ರಿ ಮಾಡಿ : ಮೈಸೂರಿಗೆ ಒಂದು ಸಚಿವ ಸ್ಥಾನ ಕೊಡಿ ಅಂತಾ ಸಿಎಂ ಕೇಳಿದ್ದೇನೆ. ಮೈಸೂರು ವಿಭಾಗಕ್ಕೆ ಸಚಿವರೆ ಇಲ್ಲ. ರಾಜಕೀಯವಾಗಿ ಶಕ್ತಿ ಇರುವ ವಿಭಾಗವಿದು. ಆದರೆ ಈ ಬಾರಿ ಸಚಿವ ಸಂಪುಟ ರಚನೆಯಲ್ಲಿ ಮೈಸೂರು ಭಾಗವನ್ನು ಕಡೆಗಣಿಸಲಾಗಿದೆ ಎಂದು ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು. ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರನ್ನು ಮಂತ್ರಿ ಮಾಡಿ.‌ ಯಾಕೆ ಮಾಡಬಾರದು..? ಇನ್ನು ನಾಲ್ಕು ಸಚಿವ ಸ್ಥಾನ ಖಾಲಿ ಇದೆ. ರಾಮದಾಸ್ ಹಿರಿಯರು ಇದ್ದಾರೆ. ಅವರನ್ನು ಪರಿಗಣಿಸಿ ಮಂತ್ರಿ ಮಾಡಿ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದರು. : ---.-..--