ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಮತ್ತೊಂದು ಸಂಕಷ್ಟ. ಬೆಂಗಳೂರು,ಆಗಸ್ಟ್,10,2021(..):ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹೌದು, ಚೆಕ್ ಬೌನ್ಸ್ ಪ್ರಕರಣಕ್ಕೆ ಹೈಕೋರ್ಟ್ ಮರುಜೀವ ನೀಡಿದೆ. ಸಹಕಾರ ಬ್ಯಾಂಕ್​ ಗೆ ರೂ. 5.2 ಕೋಟಿ ಮೊತ್ತದ ಚೆಕ್ ಬೌನ್ಸ್ ಆಗಿದ್ದ ಪ್ರಕರಣವನ್ನ ಚಿಕ್ಕೋಡಿ ನ್ಯಾಯಾಲಯ ವಜಾಗೊಳಿಸಿತ್ತು. ಇದೀಗ ಚಿಕ್ಕೋಡಿ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್​ ರದ್ದುಪಡಿಸಿದ್ದು, ಖಾಸಗಿ ದೂರು ದಾಖಲಿಸಿದ ದಿನಾಂಕದಿಂದ ಮರು ವಿಚಾರಣೆ ನಡೆಸಲು ಮತ್ತು ಸೂಕ್ತ ಆದೇಶ ನೀಡಲು ಸೂಚಿಸಿದೆ. ಸಾಲಕ್ಕೆ ಪ್ರತಿಯಾಗಿ ನೀಡಿದ್ದ ರೂ. 5.2 ಕೋಟಿ ಮೌಲ್ಯದ ಚೆಕ್ ಬೌನ್ಸ್ ಆಗಿದೆ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಬೀರೇಶ್ವರ ಸೊಸೈಟಿ ದೂರು ನೀಡಿತ್ತು. ಚಿಕ್ಕೋಡಿ ನ್ಯಾಯಾಲಯಕ್ಕೆ ವಿಚಾರಣೆ ವೇಳೆ ವಕೀಲರು ಗೈರು ಹಾಜರಾದ ಹಿನ್ನೆಲೆಯಲ್ಲಿ ಪ್ರಕರಣ ವಜಾಗೊಂಡಿತ್ತು. ಚಿಕ್ಕೋಡಿ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬೀರೇಶ್ವರ ಸೊಸೈಟಿ ಹೈಕೋರ್ಟ್​ ಮೊರೆ ಹೋಗಿತ್ತು. ಬೀರೇಶ್ವರ ಕ್ರೆಡಿಟ್ ಕೋಆಪರೇಟಿವ್​ ಸೊಸೈಟಿ ಸಲ್ಲಿಸಿದ್ದ ಖಾಸಗಿ ದೂರಿನ ಬಗ್ಗೆ ನ್ಯಾಯಮೂರ್ತಿ ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿದ್ದು, ಈ ಪ್ರಕರಣದಲ್ಲಿ ಚಿಕ್ಕೋಡಿ ನ್ಯಾಯಾಲಯವು ನಡೆಸಿರುವ ವಿಚಾರಣೆ ಪ್ರಕ್ರಿಯೆ ಕಾನೂನಿಗೆ ಅನುಗುಣವಾಗಿಲ್ಲ. ವಿಚಾರಣೆಗೆ ಪರಿಗಣಿಸುವ ಮುನ್ನ ರಮೇಶ್‌ ಗೆ ನೋಟಿಸ್ ನೀಡಿ, ಮರು ವಿಚಾರಣೆ ನಡೆಸಿ ಸೂಕ್ತ ಆದೇಶ ಹೊರಡಿಸಲು ಹೈಕೋರ್ಟ್ ಸೂಚನೆ ನೀಡಿದೆ. : - – - -