ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಆನಂತರ ಬಿಜೆಪಿ ಸೇರಿ- ಎನ್.ಮಹೇಶ್ ಗೆ ತಾಕೀತು. ಚಾಮರಾಜನಗರ,ಆಗಸ್ಟ್,3,2021(..):ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ಬಿಜೆಪಿಗೆ ಸೇರ್ಪಡೆಯಾಗಿ ಎಂದು ಬಿಜೆಪಿ ಸೇರ್ಪಡೆಗೆ ಮುಂದಾಗಿರುವ ಕೊಳ್ಳೇಗಾಲ ಬಿಎಸ್ ಪಿ ಶಾಸಕ ಎನ್. ಮಹೇಶ್ ಗೆ ಬಿಎಸ್ ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ತಾಕೀತು ಮಾಡಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿರುವ ಎಂ.ಕೃಷ್ಣಮೂರ್ತಿ, ಎನ್. ಮಹೇಶ್ ಕೊಳ್ಳೆಗಾಲ ಕ್ಷೇತ್ರದಲ್ಲಿ ಬಿಎಸ್ ಪಿ ಬಿಫಾರಂನಲ್ಲಿ ಆಯ್ಕೆಯಾಗಿದ್ದಾರೆ. ಬಿಎಸ್ ಪಿ ಚಿಹ್ನೆಯಲ್ಲಿ ಶಾಸಕರಾಗಿದ್ದಾರೆ. ಹೀಗಾಗಿ ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಆನಂತರ ಬಿಜೆಪಿ ಸೇರಿ ಎಂದು ಆಗ್ರಹಿಸಿದರು. ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸಮತಯಾಚನೆ ಮಾಡುವ ವೇಳೆ ಸದನದಲ್ಲಿ ಹಾಜರಿರುವಂತೆ ಬಿಎಸ್ ಪಿ ಹೈಕಮಾಂಡ್ ಸೂಚನೆ ನೀಡಿತ್ತು. ಆದರೆ ಶಾಸಕ ಎನ್. ಮಹೇಶ್ ಹೈಕಮಾಂಡ್ ಆದೇಶ ಉಲ್ಲಂಘಸಿ ಸದನಕ್ಕೆ ಗೈರಾಗಿದ್ದರು. ಹೀಗಾಗಿ ಅವರನ್ನ ಉಚ್ಛಾಟನೆ ಮಾಡಲಾಗಿದೆ. ಈಗ ರಾಜಕೀಯಕ್ಕಾಗಿ ಅವರು ಬಿಜೆಪಿಗೆ ಹೋಗುತ್ತಿದ್ದಾರೆ. 20 ವರ್ಷಗಳ ಸಿದ್ಧಾಂತಕ್ಕೆ ಮಸಿ ಬಳಿಯುತ್ತಿದ್ದಾರೆ. ಅಂಬೇಡ್ಕರ್ ವಾದದಿಂದ ಮನುವಾದಕ್ಕೆ ಹೋಗುತ್ತಿದ್ದಾರೆ ಎಂದು ಎಂ.ಕೃಷ್ಣಮೂರ್ತಿ ಟೀಕಿಸಿದರು. : – – – - ---. .