ಕೋವಿಡ್ ಲಸಿಕೆ ಬಗ್ಗೆ ಅರಿವು: ಸೋಂಕು ಹರಡುವುದನ್ನು ನಿಲ್ಲಿಸಿ ಅಭಿಯಾನಕ್ಕೆ ಡಿಸಿಎಂ ಅಶ್ವಥ್ ನಾರಾಯಣ್ ಚಾಲನೆ ಬೆಂಗಳೂರು,ಜುಲೈ,6,2021(..): ಕೋಕಾ ಕೋಲಾ ಫೌಂಡೇಶನ್ ಮತ್ತು ಯುನೈಟೆಡ್ ವೇ ಸಹಯೋಗದಲ್ಲಿ ರಾಜ್ಯ ಸರಕಾರದ ಜತೆಗೂಡಿ ಹಮ್ಮಿಕೊಂಡಿರುವ ʼಸೋಂಕು ಹರಡುವುದನ್ನು ನಿಲ್ಲಿಸಿʼ ( ) ಎಂಬ ಕೋವಿಡ್ ಲಸಿಕೆ ಜಾಗೃತಿ ಅಭಿಯಾನಕ್ಕೆ ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಮಂಗಳವಾರ ಚಾಲನೆ ನೀಡಿದರು. ಬೆಂಗಳೂರು ನಗರದ ಪ್ರದೇಶದ 20 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಇದಾಗಿದ್ದು, ನಂತರದ ದಿನಗಳಲ್ಲಿ ರಾಜ್ಯಾದ್ಯಂತ ನಡೆಯಲಿದೆ ಎಂದು ಕಾರ್ಯಕ್ರಮದ ನಂತರ ಡಾ.ಅಶ್ವತ್ಥನಾರಾಯಣ ಮಾಧ್ಯಮಗಳಿಗೆ ತಿಳಿಸಿದರು. ಈ ಅಭಿಯಾನದ ಜತೆಗೆ ಆಯಾ ಪ್ರದೇಶಗಳ ಆರೋಗ್ಯ ಕೇಂದ್ರಗಳಿಗೆ, ಆಶಾ ಕಾರ್ಯಕರ್ತೆರಿಗೆ ಆರೋಗ್ಯ ಪರಿಕರಗಳ ವಿತರಣೆ ಮಾಡಲಾಗುತ್ತದೆ. ಇಂದು ಸಾಂಕೇತಿಕವಾಗಿ 10 ಮಂದಿ ಆಶಾ ಕಾರ್ಯಕರ್ತೆರಿಗೆ ಮತ್ತು ಪ್ರಾಥಮಿಕ ಕೇಂದ್ರ ಒಂದರ ವೈದ್ಯರಿಗೆ ಆರೋಗ್ಯ ಪರಿಕರಗಳನ್ನು ವಿತರಣೆ ಮಾಡಲಾಯಿತು ಎಂದು ಡಿಸಿಎಂ ಹೇಳಿದರು. ಲಸಿಕೆ ಬಗ್ಗೆ ಜನರಲ್ಲಿರುವ ಭಯ, ಆತಂಕವನ್ನು ನಿವಾರಣೆ ಮಾಡುವುದೇ ಈ ಅಭಿಯಾನದ ಉದ್ದೇಶ. ಮೂರನೇ ಅಲೆಯನ್ನು ಯಶಸ್ವಿಯಾಗಿ ತಡೆಯಲು ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು. ಅದರಲ್ಲೂ ವಿಕಲಚೇತನರು, ಹಿರಿಯ ನಾಗರಿಕರು ಮತ್ತು ಅವರ ಪೋಷಕರು ಕಡ್ಡಾಯವಾಗಿ ಲಸಿಕೆ ಪಡೆಯಬೇಕೆಂದು ಅವರು ಮನವಿ ಮಾಡಿದರು. ವಿವಿಧಾ ಎಂಟರ್‌ಪ್ರೈಸ್‌ ಮ್ಯಾನೇಜಿಂಗ್ ಪಾಲುದಾರ ಡಾ.ಜಿ.ಕೆ.ಮಹಾಂತೇಶ್ ಮಾತನಾಡಿ, ಈ ಅಭಿಯಾನದಲ್ಲಿ 20 ಲಸಿಕಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಆ ಕೇಂದ್ರಗಳಿಗೆ ಅಗತ್ಯ ಆರೋಗ್ಯ ಪರಿಕರಗಳ ನೀಡಲಾಗುವುದು. ಜನರಲ್ಲಿರುವ ತಪ್ಪು ಅಭಿಪ್ರಾಯಗಳನ್ನು ಹೋಗಲಾಡಿಸಲಾಗುವುದು ಎಂದರು. : – - - -