ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಜಟಾಪಟಿ ವಿಚಾರ: ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ ಬಡಗಲಪುರ ನಾಗೇಂದ್ರ. ಮೈಸೂರು,ಜೂನ್,11,2021(..): ಮೈಸೂರಿನಲ್ಲಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಜಟಾಪಟಿಯ ವಿಚಾರಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ರಾಜ್ಯ ರೈತ ಮುಖಂಡ ಬಡಗಲಪುರ ನಾಗೇಂದ್ರ ಒತ್ತಾಯ ಮಾಡಿದರು. ಮೈಸೂರಿನಲ್ಲಿ ಇಂದು ಮಾತನಾಡಿದ ಬಡಗಲಪುರ ನಾಗೇಂದ್ರ, ಮೈಸೂರಿನಂತ ನಗರದಲ್ಲಿ ಪ್ರಸ್ತುತ ಬೆಳವಣಿಗೆ ನಡೆಯಬಾರದಿತ್ತು. ಮೈಸೂರಿಗೆ ಕೆಟ್ಟ ಹೆಸರು ಬಂದಿರೋದು ನಿಜ. ನಾಲ್ವಡಿ ಅವರಂತ ಮಹಾನ್ ವ್ಯಕ್ತಿ ಆಳಿದ ನಾಡಲ್ಲಿ ಈ ಬೆಳೆವಣಿಗೆ ನಡೆಯ ಬಾರದಿತ್ತು. ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಜಟಾಪಟಿಯ ಬಗ್ಗೆ ದೇಶದ ನಾನಾ ಭಾಗದ ವ್ಯಕ್ತಿಗಳಿಂದ ನನಗೆ ಕರೆ ಬರುತ್ತಿದೆ. ಈ ಬಗ್ಗೆ ದೇಶದ ನಾನಾ ಭಾಗಗಳಲ್ಲಿ ಚರ್ಚೆಯಾಗುತ್ತಿದೆ. ಭೂ ಮಾಫಿಯಾ ದಿಂದ ನನ್ನ ವರ್ಗಾವಣೆ ಆಗಿದೆ ಎಂದು ರೋಹಿಣಿ ಗಂಭೀರ ಆರೋಪ ಮಾಡುತ್ತಿದ್ದಾರೆ. ಇನ್ನೊಂದೆಡೆ ಸಾ.ರಾ ಮಹೇಶ್ ಪ್ರತ್ಯಾರೋಪ ಮಾಡುತ್ತಿದ್ದಾರೆ. ಮೈಸೂರಿನ ಜನತೆಗೆ ಆರೋಪ-ಪ್ರತ್ಯಾರೋಪಗಳ ಬಗ್ಗೆ ನಿಜಾಂಶ ಗೊತ್ತಾಗಬೇಕು. ಈ ಬಗ್ಗೆ ಸಿಎಂ ಗೆ ಪತ್ರ ಬರೆಯುತ್ತಿದ್ದೇವೆ ಎಂದರು. ಐಎಎಸ್ ಹುದ್ದೆಯನ್ನೇ ರದ್ದು ಮಾಡಬೇಕು. ಮಹಾತ್ಮ ಗಾಂಧೀಜಿ ಅವರು ಸಹ ಇದನ್ನೇ ಹೇಳಿರೋದು. ಐಎಎಸ್ ಎನ್ನೋದು ಬ್ರಿಟಿಷ್ ಸಂಸ್ಕೃತಿಯ ಬಿಳಿಆನೆಗಳಿದ್ದಂತೆ. ನಮ್ಮ ದೇಶಕ್ಕೆ ಐಎಎಸ್ ನಂತ ಹುದ್ದೆಯ ಅಗತ್ಯವಿಲ್ಲ. ಜಿಲ್ಲೆಯ ಇಬ್ಬರು ಐಎಎಸ್ ಅಧಿಕಾರಿಗಳು ನಿಯಮ ಬಾಹಿರವಾಗಿ ನಡೆದುಕೊಂಡಿದ್ದಾರೆ. ಪ್ರತಾಪ್ ಸಿಂಹ, ಸಾ.ರಾ ಮಹೇಶ್ ಆಪ್ರಬುದ್ಧತೆ ಪ್ರದರ್ಶನವಾಗಿದೆ. ಜನರಿಂದ ಆಯ್ಕೆಯಾದ ಜನಪ್ರತಿನಿಧಿಯ ನಡವಳಿಕೆ ಕಾಣಿಸಲಿಲ್ಲ. ಈ ವಿಚಾರದಲ್ಲಿ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಬಡಗಲಪುರ ನಾಗೇಂದ್ರ ಆಗ್ರಹಿಸಿದರು. : - -- - - -