ಡಿಸಿ ರೋಹಿಣಿ ಸಿಂಧೂರಿ ಪರ ಬ್ಯಾಟಿಂಗ್ : ಭೂ ಹಗರಣ ತನಿಖೆಗೆ ಆಗ್ರಹಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ. ಮೈಸೂರು,ಜೂನ್,5,2021(..):ಮೈಸೂರಿನಲ್ಲಿ ನಡೆದಿರುವ ಭೂ ಹಗರಣದ ತನಿಖೆ ನಡೆಸುವಂತೆ ಆಗ್ರಹಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗಾರಾಜ್ ಇಂದು ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ನಡೆಸಿದ ವಾಟಾಳ್ ನಾಗರಾಜ್, ಮೈಸೂರಿನಲ್ಲಿ ಕಳೆದ 25 ವರ್ಷದಿಂದ ಸಾಕಷ್ಟು ಭೂ ಹಗರಣ ನಡೆದಿದೆ. ಇದರ ಸಮಗ್ರ ತನಿಖೆ‌ಯನ್ನು ಜಿಲ್ಲಾಧಿಕಾರಿ ಮಾಡಬೇಕು. 25 ವರ್ಷದ ಕಡತಗಳನ್ನು ಪರಿಶೀಲನೆ ಮಾಡಬೇಕು. ಇದರ ಸಮಗ್ರ ತನಿಖೆಯಾಗುವವರೆಗೂ ನಾನು ಹೋರಾಟ ಮಾಡುತ್ತೇನೆ ಎಂದು ಆಗ್ರಹಿಸಿದರು. ಡಿಸಿ ರೋಹಿಣಿ ಸಿಂಧೂರಿ ಪರ ವಾಟಾಳ್ ನಾಗರಾಜ್ ಬ್ಯಾಟಿಂಗ್…. ಮೈಸೂರಿನ ಇಬ್ಬರು ಐಎಎಸ್ ಅಧಿಕಾರಿಗಳ ಜಟಾಪಟಿ ಸಂಬಂಧ ಡಿಸಿ ರೋಹಿಣಿ ಸಿಂಧೂರಿ ಪರ ಬ್ಯಾಟಿಂಗ್ ಮಾಡಿದ ವಾಟಾಳ್ ನಾಗರಾಜ್, ರೋಹಿಣಿ ಸಿಂಧೂರಿ ದಕ್ಷ ಅಧಿಕಾರಿ. ಅವರನ್ನು ವರ್ಗಾವಣೆ ಮಾಡಬಾರದು. ಅವರ ವರ್ಗಾವಣೆಗೆ ದೊಡ್ಡ ಪಿತೂರಿಯಾಗುತ್ತಿದೆ. ನನಗೂ ಯಡಿಯೂರಪ್ಪರಿಗೂ ಆಗಲ್ಲ, ಆದರು ಅವರಿಗೆ ನಾನು ಹೇಳುತ್ತೇನೆ ಅವರನ್ನ ವರ್ಗಾವಣೆ ಮಾಡಬಾರದು ಎಂದರು. ರೋಹಿಣಿ ಸಿಂಧೂರಿ ದಕ್ಷ ಅಧಿಕಾರಿಯಾಗಿದ್ದಾರೆ. ಯಾರು ಪಿತೂರಿ ಮಾಡುತ್ತಿದ್ದಾರೆ ಎಂಬುದನ್ನು ನಾನು ಹೇಳುವುದಿಲ್ಲ. ಕೆಲವರ ಬಂಡವಾಳ ಬಯಲಾಗುತ್ತದೆ ಎಂದು ಪಿತೂರಿ ನಡೆದಿದೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು. ಇನ್ನು ದ್ವಿತೀಯ ಪಿಯುಸಿ ಪರೀಕ್ಷೆ ಯಾವ ರೀತಿ ರದ್ದು ಮಾಡಿದ್ದಾರೆ. ಅದೇ ರೀತಿ ಎಸ್.ಎಸ್.ಎಲ್.ಸಿ ಪರೀಕ್ಷೆ ರದ್ದು ಮಾಡಬೇಕು. ಎಲ್ಲರನ್ನು ಪರೀಕ್ಷೆ ಇಲ್ಲದೆ ಪಾಸು ಮಾಡಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು. : - – - - - –