ಎರಡು ಬೈಕ್‌ ಗಳ ನಡುವೆ ಮುಖಾಮಖಿ ಡಿಕ್ಕಿ: ಸವಾರ ಸಾವು. ಮೈಸೂರು,ಮೇ,29,2024 (..):ಎರಡು ಬೈಕ್‌ ಗಳ ನಡುವೆ ಮುಖಾಮಖಿ ಡಿಕ್ಕಿಯಾಗಿ ಓರ್ವ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಗೀಕಹಳ್ಳಿಹುಂಡಿ ಗ್ರಾಮದ ಬಳಿ ನಡೆದಿದೆ. ಆಲಂಬೂರು ಗ್ರಾಮದ ಪವನ್ ಕುಮಾರ್ (19) ಮೃತ ಯುವಕ. ಆಲಂಬೂರು ಮುಂಟಿ ಗ್ರಾಮದಿಂದ ನಂಜನಗೂಡು ಕಡೆಗೆ ಬೈಕ್ ನಲ್ಲಿ ಪವನ್ ಕುಮಾರ್ ತೆರಳುತ್ತಿದ್ದ. ನಂಜನಗೂಡು ಕಡೆಯಿಂದ ತಿ.ನರಸೀಪುರ ಕಡೆಗೆ ಬರುತ್ತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಗೀಕಹಳ್ಳಿ ಹುಂಡಿ ಗ್ರಾಮದ ಬಸ್ ನಿಲ್ದಾಣದ ಬಳಿ ಅಪಘಾತ ಸಂಭವಿಸಿದ್ದು, ಡಿಕ್ಕಿ ಹೊಡೆದ ಪರಿಣಾಮವಾಗಿ ಪವನ್ ಕುಮಾರ್ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿದೆ. ಗಂಭೀರವಾಗಿ ಗಾಯಗೊಂಡಿದ್ದ ಗಾಯಾಳ ಪವನ್ ಕುಮಾರ್ ನನ್ನು ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆಆರ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪವನ್ ಕುಮಾರ್ ಮೃತಪಟ್ಟಿದ್ದಾರೆ. ಬೈಕ್ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ಪವನ್ ಕುಮಾರ್ ತಂದೆ ಮಹದೇವ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. : , , , ,