ಪತ್ರಕರ್ತರ ನೆರವಿಗೆ ಬಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರು: ಉಚಿತ ಆಕ್ಸಿಜನ್ ಒದಗಿಸಲು ಯೋಜನೆ. ಬೆಂಗಳೂರು,ಮೇ,24,2021(..):ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಕೋವಿಡ್ 19 ಸಾಂಕ್ರಮಿಕ ರೋಗದ ಸಂಕಷ್ಟದಲ್ಲಿ ಮತ್ತೊಮ್ಮೆ ಪತ್ರಕರ್ತರ ರಕ್ಷಣೆಗೆ ಮುಂದೆ ಬಂದಿದೆ. ಹೌದು ಮೊದಲ ಅಲೆಯ ವೇಳೆಯಲ್ಲಿ ಫುಡ್ ಕಿಟ್ ನೀಡಿದ್ದ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಈ ಬಾರಿ ವ್ಯಾಕ್ಸಿನೇಷನ್ ವ್ಯವಸ್ಥೆ ಮಾಡಿದೆ. ಹಾಗೆಯೇ ಮೊನ್ನೆ ಮೊನ್ನೆ ಆಂಬ್ಯುಲೆನ್ಸ್ ಯೋಜನೆಯನ್ನೂ ಜಾರಿಗೆ ತಂದಿತ್ತು. ಹೀಗೆ ಪತ್ರಕರ್ತರ ಹಾಗೂ ಅವರ ಕುಟುಂಬದ ನೆರವಿಗೆ ನಿಂತಿರುವ ಪ್ರೆಸ್ ಕ್ಲಬ್ ಆಫ್ ಬೆಂಗಳೂರು, ತನ್ನ ಸದಸ್ಯರ ಮತ್ತು ಅವರ ಕುಟುಂಬದ ಮಂದಿ ಉಸಿರಾಟದ ಸಮಸ್ಯೆಗೆ ಒಳಗಾದರೆ ಉಚಿತವಾಗಿ ಅವರ ಮನೆಗೆ ಆಕ್ಸಿಜನ್ ಒದಗಿಸುವ ಹೊಸ ಯೋಜನೆಯನ್ನು ಹಮ್ಮಿ ಕೊಂಡಿದೆ. ಈ ಕುರಿತು ಮಾಹಿತಿ ನೀಡಿರುವ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಅಧ್ಯಕ್ಷರಾದ ಸದಾಶಿವ ಶೆಣೈ, ಪ್ರೆಸ್ ಕ್ಲಬ್ ಆಫ್ ಬೆಂಗಳೂರು ವತಿಯಿಂದ ಉಚಿತವಾಗಿ ಅವರ ಮನೆಗೆ ಆಕ್ಸಿಜನ್ ಒದಗಿಸುವ ಹೊಸ ಯೋಜನೆಯನ್ನು ಹಮ್ಮಿ ಕೊಳ್ಳಲಾಗಿದೆ. ನಮ್ಮ ಸದಸ್ಯರು ಮಾಡಬೇಕಿರೋದು ಇಷ್ಟೆ, ಏನಾದ್ರೂ ಅನಾರೋಗ್ಯಕ್ಕೆ ಒಳಗಾಗಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡರೆ ನಾವು ನೀಡಿರುವ ನಮ್ಮ ಕ್ಲಬ್ ನ ಮೆನೇಜರ್ ಮಂಜುನಾಥ್ ಅವರ 9845482307 ನಂಬರ್ ಗೆ ತಕ್ಷಣ ಕರೆ ಮಾಡಿ. ಆದರೆ ಒಂದು ವಿಷಯ ನೆನಪಿರಲಿ, ನಿಮ್ಮ ವೈದ್ಯರ ನಂಬರ್ ಕೊಡಬೇಕು. ವೈದ್ಯರು ಶಿಫಾರಸ್ಸು ಮಾಡಿದರೆ ಮಾತ್ರ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಆಕ್ಸಿಜನ್ ವ್ಯವಸ್ಥೆ ಮಾಡುತ್ತೆ ಎಂದಿದ್ದಾರೆ. ಪ್ರೆಸ್ ಕ್ಲಬ್ ಮನವಿಗೆ ಸ್ಪಂದಿಸಿ ಯಶ್ ಟೆಲ್ ಸಂಸ್ಥೆಯ ಮಾಲಿಕ ಮಂಜುನಾಥ್ ರವರು ನಮಗೆ ಈ ಸಹಾಯ ಹಸ್ತ ನೀಡಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ 4 ಆಕ್ಸಿಜನ್ ಕಾನ್ಸೆನ್ಟ್ರೇಟರ್ ಒದಗಿಸಿ ಕೊಟ್ಟಿದ್ದಾರೆ. ಈ ಕಾರಣಕ್ಕೆ ಯಶ್ ಟೆಲ್ ಸಂಸ್ಥೆಯ ಚೇರ್ಮನ್ ಮಂಜುನಾಥ್ ಅವರಿಗೆ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಚಿರಋಣಿ. ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆ. ಸಾಧಾರಣವಾಗಿ ವ್ಯಕಿಯೊಬ್ಬ ಕೊರೋನ ದಾಳಿಗೆ ತುತ್ತಾಗಿ ಉಸಿರಾಟದ ಸಮಸ್ಯೆಯಿಂದ ಬಳಲಿದಾಗ ತಕ್ಷಣ ಆಕ್ಸಿಜನ್ ಸಿಕ್ಕಿ, 3-4 ಗಂಟೆ ಈ ವ್ಯವಸ್ಥೆ ಇದ್ದರೆ ರೋಗಿ ಸಾವಿನಿಂದ ಪಾರಾಗುತ್ತಾನೆ ಅನ್ನೋದು ವೈದ್ಯರ ಅಭಿಪ್ರಾಯ. ಈಗ ಬೆಂಗಳೂರಿನಲ್ಲಿ ಆಕ್ಸಿಜನ್ ಇಲ್ಲ, ಬೆಡ್ ಇಲ್ಲ ಅಂತ ಅಲೆದಾಡುವ ಈ ಸಂದರ್ಭಲ್ಲಿ, ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಮುತುವರ್ಜಿ ವಹಿಸಿ ಪತ್ರಕರ್ತರಿಗಾಗಿ ಈ ವಿಶೇಷ ವ್ಯವಸ್ಥೆ ಮಾಡಿದೆ ಎಂದು ತಿಳಿಸಿದ್ದಾರೆ. ಆಕ್ಸಿಜನ್ ಕಾನ್ಸನ್ಟ್ರೇಟರ್ ನ ಉಚಿತವಾಗಿ ರೋಗಿಯ ಮನೆಗೆ ತಲುಪಿಸಲು ಸಮಾಜ ಸೇವಕರಾದ ಯತೀಶ್ ಮತ್ತು ಅವರ ಉತ್ಸಾಹಿ ತಂಡ ಮುಂದೆ ಬಂದಿದೆ. 9845900666 ಇದು ಯತೀಶ್ ಅವ್ರ ನಂಬರ್. ದಿನದ 24 ಗಂಟೆ ಅವರನ್ನು ಸಂಪರ್ಕಿಸಬಹುದು. ಇವರೆಲ್ಲರಿಗೂ ನಾವು ಆಭಾರಿ.ಈ ಸೇವೆ ಹಗಲು-ರಾತ್ರಿ ಇಡೀ ದಿನ ನಿಮಗಾಗಿ ಚಾಲನೆಯಲ್ಲಿ ಇರುತ್ತದೆ ಎಂದು ಸದಾಶಿವ ಶೆಣೈ ತಿಳಿಸಿದ್ದಾರೆ. ಪ್ರೆಸ್ ಕ್ಲಬ್ ಸದಸ್ಯರಲ್ಲದ ಪತ್ರಕರ್ತರಿಗೆ ಈ ಸೌಲಭ್ಯವನ್ನು ಕಾರ್ಯಕಾರಿಣಿ ಸಮಿತಿ ವಿಸ್ತರಿಸಿದೆ. ಆದರೆ ಪ್ರೆಸ್ ಕ್ಲಬ್ ಸದಸ್ಯರ ಮುಖಾಂತರ ಬಂದಲ್ಲಿ ಮಾತ್ರ ಈ ಸೇವೆ ಕಲ್ಪಿಸಲಾಗುವುದು. : - – - -