ಕೋವಿಡ್ ಪ್ರಕರಣ ಹೆಚ್ಚಳ ಮೈಸೂರಿನ ಬೈಲುಕುಪ್ಪೆ ಸಂಪೂರ್ಣ ಲಾಕ್ ಡೌನ್ ಗೆ ಸೂಚನೆ. ಮೈಸೂರು, ಮೇ 23, 2021 : (.. ) ಬೈಲುಕುಪ್ಪೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿದ್ದು, ಅಲ್ಲಿನ ಜನರಿಂದ ಮತ್ತಷ್ಟು ಜನರಿಗೆ ಹರಡುವ ಸಂಭವವಿರುವುದರಿಂದ ಅದನ್ನು ಸಂಪೂರ್ಣ ಲಾಕ್ ಡೌನ್ ಮಾಡಿ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸೂಚಿಸಿದರು. ಭಾನುವಾರ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ, ಹುಣಸೂರು ವಿಧಾನ ಸಭಾ ಕ್ಷೇತ್ರದ ಆರೋಗ್ಯ ಕೇಂದ್ರಗಳಿಗೆ ಹಾಗೂ ಕೋವಿಡ್ ಕೇರ್ ಸೆಂಟರ್ ಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಬೈಲುಕುಪ್ಪೆಗೆ ಹೊರಗಡೆಯಿಂದ ಯಾರು ಬರಬಾರದು. ಇಲ್ಲಿಂದ ಹೊರಗಡೆಗೆ ಯಾರು ಹೋಗಬಾರದು. ಅವರಿಗೆ ಎಲ್ಲಾ ವಸ್ತುಗಳು ಅಲ್ಲಿಯೇ ಸಿಗುವಂತೆ ಕಲ್ಪಿಸಿ ಎಂದರು. ಪಿರಿಯಾಪಟ್ಟಣದ 4 ಹೋಬಳಿಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಆ 4 ಹೋಬಳಿಗಳು ಕೊರೊನಾ ಮುಕ್ತ ಹಳ್ಳಿಗಳಾಗಬೇಕು. ಮೇ 31ರೊಳಗಾಗಿ ಮನೆ ಮನೆ ಸರ್ವೆಯನ್ನು ಮಾಡಿ ಮುಗಿಸಬೇಕು. ಜೂ 1ರಿಂದ ಯಾವಾಗಲಾದರೂ ಆ ಹೋಬಳಿಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡುವೆ ಎಂದರು. ಮನೆಮನೆ ಸರ್ವೆಯನ್ನು ನಡೆಸಲು ಪಿಡಿಒಗಳಿಗೆ ಒಂದು ಗುರಿಯನ್ನು ನಿಗಧಿಪಡಿಸಿ. ಅವರೂ ಸಹ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಲಿ. ನಂಜನಗೂಡಿನ ಪಿಡಿಒಗಳಂತೆ ಕಾರ್ಯನಿರ್ವಾಹಿಸಲಿ. ಮನೆ ಮನೆ ಸರ್ವೆಯನ್ನು ನಡೆಸಲು ಅಂಗನಾಡಿ ಹಾಗೂ ಆಶಾ ಕಾರ್ಯಕರ್ತರನ್ನು ಬಳಸಿಕೊಳ್ಳಿ. ಅವರಿದ್ದರೆ ಸರ್ವೆಯನ್ನು ಆದಷ್ಟು ಬೇಗ ಮುಗಿಸಬಹುದು. ಅವರಿಗಾಗಿ ಫೇಸ್ ಷೀಲ್ಡ್ ಸೇರಿದಂತೆ ಕಿಟ್ ಒದಗಿಸಲಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಕೆ.ಮಹದೇವ್, ಹೆಚ್.ಪಿ.ಮಂಜುನಾಥ್, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಎ.ಎಂ.ಯೋಗೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ತಹಶಿಲ್ದಾರ್ ಗಳಾದ ಬಸವರಾಜು ಚಂದ್ರಮೌಳಿ, ತಾಲ್ಲೂಕು ವೈದ್ಯಾಧಿಕಾರಿ ಶರತ್ ಬಾಬು, ಮುಖ್ಯ ವೈದ್ಯಾದಿಕಾರಿ ಡಾ.ಜೆ.ಶ್ರೀನಿವಾಸ್, ಡಾ.ದೇವಿಕ ಸೇರಿದಂತೆ ಇತರರು ಹಾಜರಿದ್ದರು. ಸಮಿತಿ ರಚನೆ ಕೊರೋನಾ ಎರಡನೇ ಅಲೆಯ ನಂತರ ಬರಲಿದೆ ಎನ್ನಲಾದ ಸಂಭವನೀಯ ಮೂರನೇ ಅಲೆಯನ್ನು ನಿಭಾಯಿಸಲು ಹಾಗೂ ಮುಂಜಾಗೃತವಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಮೈಸೂರು ನಗರ ಪಾಲಿಕೆಯ ಆಯುಕ್ತೆ ಶಿಲ್ಪನಾಗ್, ಚಲುವಾಂಬ ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಸುಧಾ, ವೆಂಟಿಲೇಟರ್ ತಯಾರಿಸುವ ಸ್ಕ್ಯಾನ್ರೇ ಕಂಪನಿಯ ಮುಖ್ಯಸ್ಥ ವಿಶ್ವಪ್ರಸಾದ್ ಆಳ್ವಾ, ಹಾಗೂ ಮಕ್ಕಳ ತಜ್ಞ ವೈದ್ಯರು ಇದ್ದಾರೆ. ಈ ಸಮಿತಿ ಒಂದು ವಾರದೊಳಗೆ ವರದಿ ನೀಡಲು ತಿಳಿಸಲಾಗಿದೆ ಎಂದು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. : ---.