ಕೋವಿಡ್ ಗೆ ಬಲಿಯಾದ ವ್ಯಕ್ತಿ ಮೃತದೇಹ ಕೊಡಲು ಖಾಸಗಿ ಅಸ್ಪತ್ರೆ ಹಿಂದೇಟು : ಎಚ್ಚರಿಕೆ ನೀಡಿದ ನಂತರ ಶವ ಹಸ್ತಾಂತರ… ಮೈಸೂರು,ಮೇ,21,2021(..):ಕೋವಿಡ್ ಬಲಿಯಾದ ವ್ಯಕ್ತಿಯ ಮೃತದೇಹ ಕೊಡದೆ ಬಾಕಿ ಹಣ ಪಾವತಿಸುವಂತೆ ಖಾಸಗಿ ಆಸ್ಪತ್ರೆ ಪಟ್ಟು ಹಿಡಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಶ್ರೀರಾಂಪುರದ ಗೌತಮ ಸಹಕಾರಿ ಅಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಕೋವಿಡ್ ಸೋಂಕಿಗೆ ತುತ್ತಾಗಿದ್ದ ಆಲನಹಳ್ಳಿ ಬಸವರಾಜು ಎಂಬುವವರು ನಿನ್ನೆ ರಾತ್ರಿ ಕೋವಿಡ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಆದರೆ ಆಸ್ಪತ್ರೆ ಆಡಳಿತ ಮಂಡಳಿ ಇನ್ನೂ ಒಂದೂವರೆ ಲಕ್ಷ ರೂ. ಕೊಡದ ಹೊರತು ಶವ‌ ಕೊಡುವುದಿಲ್ಲ ಎಂದು ಪಟ್ಟು ಹಿಡಿದಿತ್ತು. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಮುಡಾ ಅಧ್ಯಕ್ಷ ಎಚ್.ವಿ. ರಾಜೀವ್ ಹಾಗೂ ಜಂಗಲ್ ಲಾಡ್ಜಸ್ ಅಧ್ಯಕ್ಷ ಅಪ್ಪಣ್ಣ, ಆಸ್ಪತ್ರೆ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದರು. ಎಚ್.ವಿ. ರಾಜೀವ್ ಹಾಗೂ ಜಂಗಲ್ ಲಾಡ್ಜಸ್ ಅಧ್ಯಕ್ಷ ಅಪ್ಪಣ್ಣ ಅವರ ಮಧ್ಯ ಪ್ರವೇಶದಿಂದಾಗಿ ಖಾಸಗಿ ಆಸ್ಪತ್ರೆ ಶವ ಹಸ್ತಾಂತರ ಮಾಡಿತು. ಮೈಸೂರು ಮಹಾನಗರ ಪಾಲಿಕೆ ಸಿಬ್ಬಂದಿ ಅಂಬ್ಯುಲೆನ್ಸ್ ನಲ್ಲಿ ಶವ ಕೊಂಡೊಯ್ದರು. : –-- - -