ಕೂಡಲೇ ಕಪ್ಪು ಶಿಲೀಂಧ್ರ ಸೋಂಕನ್ನು ‘ಸಾಂಕ್ರಾಮಿಕ ರೋಗ’ ಎಂದು ಘೋಷಿಸಿ- ರಾಜ್ಯ ಸರ್ಕಾರಕ್ಕೆ ಹೆಚ್.ಡಿ ಕುಮಾರಸ್ವಾಮಿ ಆಗ್ರಹ… ಬೆಂಗಳೂರು,ಮೇ,21,2021(..):ಕೂಡಲೇ ಕಪ್ಪು ಶಿಲೀಂಧ್ರ ಸೋಂಕನ್ನು ‘ಸಾಂಕ್ರಾಮಿಕ ರೋಗ’ ಎಂದು ಘೋಷಿಸುವಂತೆ ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಕಪ್ಪು ಶಿಲೀಂಧ್ರ ಸೋಂಕನ್ನು (ಮ್ಯೂಕರ್‌ ಮೈಕೊಸಿಸ್‌) ತೆಲಂಗಾಣ, ತಮಿಳುನಾಡು, ರಾಜಸ್ಥಾನ, ಒಡಿಶಾ, ಗುಜರಾತ್‌, ಚಂಡೀಗಢದಲ್ಲಿ ಸಾಂಕ್ರಾಮಿಕ ರೋಗ ಎಂದು ಘೋಷಿಸಲಾಗಿದೆ. ಕೇಂದ್ರ ಸರ್ಕಾರವೂ ಇದನ್ನು ಸಾಂಕ್ರಾಮಿಕ ಎಂದು ಘೋಷಿಸುವಂತೆ ರಾಜ್ಯಗಳಿಗೆ ಸದ್ಯ ಹೇಳಿದೆ. ರಾಜ್ಯವೂ ಈ ಮಾರಕ ಕಾಯಿಲೆಯನ್ನು ಈ ಕೂಡಲೇ ‘ಸಾಂಕ್ರಾಮಿಕ’ ಎಂದು ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ. ರೋಗದ ತಡೆಗಾಗಿ ತ್ವರಿತ, ಅಗತ್ಯ ಕ್ರಮ ಕೈಗೊಳ್ಳಲು, ಮುಂಚೂಣಿಯಲ್ಲಿ ಹೋರಾಡುವವರನ್ನು ರಕ್ಷಿಸಲು ‘1897ರ ಸಾಂಕ್ರಾಮಿಕ ರೋಗ ತಡೆ ಕಾಯಿದೆ’ಯನ್ನು ಕಪ್ಪು ಶಿಲೀಂಧ್ರ ರೋಗದ ವಿಚಾರದಲ್ಲಿ ಜಾರಿ ಮಾಡಲೇಬೇಕಾಗಿದೆ. ಕಪ್ಪು ಶಿಲೀಂಧ್ರ ರೋಗದಲ್ಲಿ ಸಾವಿನ ಸಾಧ್ಯತೆಗಳು ಹೆಚ್ಚಿವೆ. ಮಾರಕ, ಭಯಾನಕವೂ ಆಗಿರುವ ಈ ಕಾಯಿಲೆಯನ್ನು ಹಿಮ್ಮೆಟ್ಟಿಸಲೇಬೇಕಿದೆ. ಸಾಂಕ್ರಾಮಿಕ ರೋಗಗಳ ನಿರ್ವಹಣೆ ವಿಚಾರದಲ್ಲಿ ರಾಜ್ಯ ಸರ್ಕಾರ ತೋರುತ್ತಿರುವ ಆಲಸ್ಯ ಸರಿಯಲ್ಲ. ಕಪ್ಪು ಶಿಲೀಂಧ್ರ ರೋಗದ ನಿರ್ವಹಣೆಯಲ್ಲಿ ಸರ್ಕಾರ ಪದೇ ಪದೆ ಎಡವುತ್ತಿರುವುದು ಕಾಣಿಸುತ್ತಿದೆ. ರೋಗದ ಚಿಕಿತ್ಸೆಗೆ ಅಗತ್ಯವಿರುವ ಔಷಧಗಳ ದಾಸ್ತಾನು ಹೊಂದದೇ ಇರುವುದು, ಅಗತ್ಯ ಪ್ರಮಾಣದ ಔಷಧವನ್ನು ಕೇಳಿ ಪಡೆದುಕೊಳ್ಳದೇ ಇರುವುದು ಇದಕ್ಕೆ ಸಾಕ್ಷಿ ಎಂದು ಹೆಚ್.ಡಿ ಕುಮಾರಸ್ವಾಮಿ ಸರ್ಕಾರವನ್ನ ಕುಟುಕಿದ್ದಾರೆ. ಕೋವಿಡ್‌ನಿಂದ ಗುಣವಾದವರೇ ಹೆಚ್ಚಾಗಿ ಕಪ್ಪು ಶಿಲೀಂಧ್ರ ಕಾಯಿಲೆ ತುತ್ತಾಗುತ್ತಾರೆ ಎಂದು ತಜ್ಞರು ಹೇಳಿದ್ದಾರೆ. ಹಾಗಾದರೆ, ಕಪ್ಪು ಶಿಲೀಂಧ್ರದ ಸಂಭಾವ್ಯ ಅಪಾಯ ಕರ್ನಾಟಕಕ್ಕೆ ಹೆಚ್ಚು. ಕೋವಿಡ್‌ ಪ್ರಕರಣಗಳು ಕರ್ನಾಟಕದಲ್ಲಿ ಅತ್ಯಧಿಕ ಪ್ರಮಾಣದಲ್ಲಿವೆ. ಅಂದರೆ, ಕಪ್ಪು ಶಿಲೀಂಧ್ರ ರೋಗವೂ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುವ ಅಪಾಯವಿದೆ. ಕಪ್ಪು ಶಿಲೀಂಧ್ರ ರೋಗವನ್ನು ಸರ್ಕಾರ ಕೂಡಲೇ ಸಾಂಕ್ರಾಮಿಕ ರೋಗ ಎಂದು ಘೋಷಿಸಬೇಕು. ಈ ಕಾಯಿಲೆಯ ಚಿಕಿತ್ಸೆಗೆ ಬೇಕಿರುವ ಔಷಧಗಳನ್ನು ಸಮರ್ಪಕವಾಗಿ ಸಂಗ್ರಹಿಸಬೇಕು. ಇದರ ವಿರುದ್ಧ ಹೋರಾಡಲು ಅಗತ್ಯವಿರುವ ನೇತ್ರ ತಜ್ಞರು, ಇಎನ್‌ಟಿ ಪರಿಣತರು, ಜನರಲ್ ಸರ್ಜನ್‌ಗಳು, ನರರೋಗ ತಜ್ಞರು, ದಂತವೈದ್ಯರನ್ನು ಸರ್ಕಾರ ಸನ್ನದ್ಧ ಸ್ಥಿತಿಯಲ್ಲಿ ಇಡಬೇಕು ಎಂದು ಹೆಚ್.ಡಿಕೆ ಸಲಹೆ ನೀಡಿದ್ದಾರೆ. : - – - – - -