ಆಕ್ಸಿಜನ್ ದುರಂತ ಪ್ರಕರಣ : ಮೈಸೂರು ಡಿಸಿಗೆ ಕ್ಲೀನ್ ಚಿಟ್ ಬೆನ್ನಲ್ಲೇ, ಚಾ.ನಗರ ಜಿಲ್ಲಾಧಿಕಾರಿ ತಲೆದಂಡ ಸನ್ನಿಹಿತ. ಮೈಸೂರು, ಮೇ 13, 2021 : ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮೇ 2 ರಂದು ನಡೆದ 24 ಮಂದಿ ಮೃತಪಟ್ಟ ಘಟನೆಗೆ ಆಕ್ಸಿಜನ್ ಕೊರತೆಯೇ ಕಾರಣ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ಇದೀಗ ಜಿಲ್ಲಾಧಿಕಾರಿ ತಲೆದಂಡ ಸನಿಹಿತವಾಗಿದೆ. ನಿವೃತ್ತ ನ್ಯಾಯಾಧೀಶ ಎನ್. ವೇಣುಗೋಪಾಲ್ ನೇತೃತ್ವದ ಸಮಿತಿ ಹೈ ಕೋರ್ಟ್‌ಗೆ ವರದಿ ನೀಡಿದ್ದು, ಈ ಪ್ರಕರಣದಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಪಾತ್ರವಿಲ್ಲ. ಬದಲಿಗೆ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರೇ ನೇರ ಹೊಣೆ. ಅವರ ಮುಂಜಾಗೃತೆ ಕೊರತೆಯಿಂದ ದುರಂತವಾಗಿದೆ. ತಮ್ಮ ವೈಫಲ್ಯ ಮುಚ್ಚಿಹಾಕಲು ನೆರೆ ಜಿಲ್ಲೆಯ ಜಿಲ್ಲಾಧಿಕಾರಿ ವಿರುದ್ಧ ಆರೋಪ ಹೊರಿಸುವುದು ಸರಿಯಲ್ಲ ಎಂದು ವರದಿ ಸ್ಪಷ್ಟವಾಗಿ ತಿಳಿಸಿದೆ. ಜತೆಗೆ ಜಿಲ್ಲಾಸ್ಪತ್ರೆಯ ಡೀನ್ ಹಾಗೂ ಡಿಎಚ್ಒ ಅವರ ಕರ್ತವ್ಯ ಲೋಪದ ಬಗೆಗೂ ವರದಿ ಬೊಟ್ಟು ಮಾಡಿದೆ. ನಾವು ಮೈಸೂರು ಜಿಲ್ಲಾಧಿಕಾರಿ ಬಳಿ ಆಕ್ಸಿಜನ್ ಕೇಳಿದ್ದು ಸೂಕ್ತ ಸಮಯಕ್ಕೆ ದೊರಕಿಸದೇ ಇರುವುದು ಈ ದುರಂತಕ್ಕೆ ಕಾರಣ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಮಾಡಿದ್ದ ಆರೋಪವನ್ನು ತಳ್ಳಿ ಹಾಕಿರುವ ತನಿಖಾ ಸಮಿತಿ, ವರದಿಯಲ್ಲಿ ಮೈಸೂರು ಡೀಸಿಗೆ ಕ್ಲೀನ್‌ ಚಿಟ್ ನೀಡಿದ್ದು, ಚಾಮರಾಜನಗರ ಜಿಲ್ಲಾಧಿಕಾರಿಯೇ ಹೊಣೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ತಪ್ಪೆಸಗಿದವರ ವಿರುದ್ಧ ಕ್ರಮ ಜರುಗಿಸಿ, ನ್ಯಾಯಾಲಯದ ಗಮನಕ್ಕೆ ತರುವಂತೆ ಕೋರ್ಟ್ ಆದೇಶಿಸಿ, ಪ್ರಕರಣದ ವಿಚಾರಣೆಯನ್ನು ಮೇ 20 ಕ್ಕೆ ಮುಂದೂಡಿದೆ. ಈ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಸರಕಾರ, ಚಾ.ನಗರ ಜಿಲ್ಲಾಧಿಕಾರಿ ವಿರುದ್ಧ ಶಿಸ್ತು ಕ್ರಮ ಜರುಗಿಸುವುದು ತುರ್ತಾಗಿದೆ. ಜತೆಗೆ ಡೀನ್ ಹಾಗೂ ಡಿಎಚ್ಒ ವಿರುದ್ಧ ಸಹ ಕ್ರಮ ಜರುಗಿಸಬೇಕಾಗಿದೆ.ಮುಖ್ಯವಾಗಿ ಇದೇ 18 ರಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಜಿಲ್ಲಾಧಿಕಾರಿಗಳ ಜತೆ ಕೋವಿಡ್ ನಿಯಂತ್ರಣ ಸಂಬಂಧ ವೀಡಿಯೋ ಸಂವಾದ ನಡೆಸಲಿದ್ದಾರೆ. ಇದಕ್ಕೂ ಮುನ್ನವೇ ಚಾ.ನಗರ ಜಿಲ್ಲಾಧಿಕಾರಿ ವಿರುದ್ಧ ಕ್ರಮ ಜರುಗಿಸಿ ಬೀಸೋ ದೊಣ್ಣೆಯಿಂದ ಪಾರಾಗುವ ಸ್ಥಿತಿಯಲ್ಲಿದೆ ರಾಜ್ಯ ಸರಕಾರ. : -------------...