ಜಲ್ಲಿ ತುಂಬಿದ ಟ್ರ್ಯಾಕ್ಟರ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು… ಮೈಸೂರು,ಮೇ,11,2021(..):ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ಸವಾರನಿಗೆ ಜಲ್ಲಿ ತುಂಬಿದ ಟ್ರಾಕ್ಟರ್ ಒಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಲಿಂಗಾಬುಧಿ ಪಾಳ್ಯದ ಬಳಿಯ ಪ್ರೀತಿ ಲೇ ಔಟ್ ನಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಡಿ.ಸಾಲುಂಡಿ ನಿವಾಸಿ ಮಧುಸೂದನ್(25) ಮೃತಪಟ್ಟ ಸವಾರ ಎಂದು ಗುರುತಿಸಲಾಗಿದೆ. ಈತ ಕಾರ್ಯ ನಿಮಿತ್ತ ಮೈಸೂರಿಗೆ ಬಂದಿದ್ದ. ಮನೆಗೆ ಮರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಹತ್ತು ಗಂಟೆಯೊಳಗೆ ಮನೆಗೆ ಸೇರಿಕೊಳ್ಳಬೇಕಿದ್ದು, ಮನೆಗೆ ಸೇರಿಕೊಳ್ಳುವ ಧಾವಂತದಲ್ಲಿದ್ದ ಯುವಕ ಮಸಣ ಸೇರಿದ್ದಾನೆ. ಹೀರೋಹೋಂಡಾ ಸ್ಪ್ಲೆಂಡರ್ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಜಲ್ಲಿ ತುಂಬಿದ ಟ್ರಾಕ್ಟರ್ ಬಂದು ಗುದ್ದಿದ್ದು, ತಲೆಯ ಮೇಲೆ ಚಕ್ರ ಹರಿದಿದೆ. ಯುವಕನ ತಲೆಗೆ ಗಂಭೀರ ಗಾಯವಾದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಕುವೆಂಪು ನಗರ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ವನಜಾಕ್ಷಿ, ಸಿಬ್ಬಂದಿಗಳಾದ ರವಿ, ರಾಜು ಭೇಟಿ ನೀಡಿ ಪರಿಶೀಲನೆ ನಡೆಸಿ ಟ್ರಾಕ್ಟರ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳೀಯರು ಇದೇ ವೇಳೆ ಪ್ರತಿಭಟನೆ ನಡೆಸಿದ ಘಟನೆಯೂ ನಡೆದಿದೆ. ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹವನ್ನು ರವಾನಿಸಲಾಗಿದ್ದು, ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : –- - –- -